RNI NO. KARKAN/2006/27779|Monday, June 16, 2025
You are here: Home » breaking news » ಮೂಡಲಗಿ:ವಿಕಲಚೇತನ ಫಲಾನುಭವಿಗಳಿಗೆ ಗುರುತಿನ ಯುಡಿಐಡಿ ಕಾರ್ಡ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ:ವಿಕಲಚೇತನ ಫಲಾನುಭವಿಗಳಿಗೆ ಗುರುತಿನ ಯುಡಿಐಡಿ ಕಾರ್ಡ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ 

ವಿಕಲಚೇತನ ಫಲಾನುಭವಿಗಳಿಗೆ ಗುರುತಿನ ಯುಡಿಐಡಿ ಕಾರ್ಡ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ ಅ 18 : ವಿಕಲಚೇತನ ಗುರುತಿನ ಯುಡಿಐಡಿ ಕಾರ್ಡ ದೇಶಾದ್ಯಂತ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತಿದ್ದು, ವಿಕಲಚೇತನರಿಗೆ ಸರ್ಕಾರದ ವಿವಿಧ ಯೋಜನೆಗಳಾದ ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಸಮನ್ವಯ ಶಿಕ್ಷಣ, ಪುನರ್ವಸತಿ ಯೋಜನೆ, ಪಿಂಚಣಿ, ರೈಲ್ವೆ ರಿಯಾಯತಿ ಮುಂತಾದ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ ಪೂರಕವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಜರುಗಿದ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ವಿತರಿಸಿ ಮಾತನಾಡಿದ ಅವರು, ವಿಕಲಚೇತನರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಯುಡಿಐಡಿ ಕಾರ್ಡ ಸಹಾಯದಿಂದ ಎಲ್ಲ ಹಂತಗಳಲ್ಲಿ ವಿಕಲಚೇತನರಿಗೆ ಒದಗಿಸಲಾಗುವ ಸೌಲಭ್ಯಗಳ ಆರ್ಥಿಕ ಹಾಗೂ ಭೌತಿಕ ಪ್ರಗತಿಯನ್ನು ಗುರುತಿಸಲು ಸಹಕಾರಿಯಾಗುತ್ತಿದೆ. ಸ್ಮಾರ್ಟಕಾರ್ಡ ರೂಪದಲ್ಲಿ ಗುರುತಿನ ಚೀಟಿಯನ್ನು ವಿಕಲಚೇತನರಿಗೆ ನೀಡಲಾಗುತ್ತಿದೆ. ಇದಕ್ಕೂ ಪೂರ್ವದಲ್ಲಿ ವಿಕಲಚೇತನರು ಯುಡಿಐಡಿ ಕಾರ್ಡನ್ನು ಪಡೆಯಲು ಗೋಕಾಕಕ್ಕೆ ತೆರಳಬೇಕಾಗಿತ್ತು. ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿರುವುದರಿಂದ ಈ ತಾಲೂಕಿನ ವಿಕಲಚೇತನರ ಅನುಕೂಲಕ್ಕಾಗಿ ಮೂಡಲಗಿಯಲ್ಲಿಯೇ ಈ ಕಾರ್ಡನ್ನು ವಿತರಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದರು.
ವಿಕಲಚೇತನರು ಯುಡಿಐಡಿ ಕಾರ್ಡನ್ನು ಪಡೆಯಬೇಕಾದರೆ ನೇರವಾಗಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬೇಕು. ಯಾವುದೇ ಕಾರಣಕ್ಕೂ ಯಾರಿಗೂ ದುಡ್ಡು ನೀಡಬೇಡಿ. ಉಚಿತವಾಗಿ ಫಲಾನುಭವಿಗಳು ಈ ಕಾರ್ಡನ್ನು ಅಧಿಕಾರಿಗಳಿಂದ ಪಡೆಯುವಂತೆ ಅವರು ಹೇಳಿದರು.
ಮೂಡಲಗಿ ಹೊಸ ತಾಲೂಕು ನಂತರ ಬಾಕಿ ಉಳಿದಿರುವ ತಾಲೂಕು ಮಟ್ಟದ ಸರ್ಕಾರಿ ಕಛೇರಿಗಳನ್ನು ತೆರೆಯಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗನೆ ತಾಲೂಕು ಮಟ್ಟದ ಕಛೇರಿಗಳು ಪ್ರಾರಂಭಗೊಳ್ಳಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ತಹಶೀಲ್ದಾರ ಶಿವಾನಂದ ಬಬಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಫಕೀರಪ್ಪ ಚಿನ್ನನ್ನವರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಸಿಪಿಐ ಶ್ರೀಶೈಲ ಬ್ಯಾಕೋಡ, ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ಮಾಜಿ ಅಧ್ಯಕ್ಷ ಹನಮಂತ ಗುಡ್ಲಮನಿ, ಪುರಸಭೆ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: