ಘಟಪ್ರಭಾ:ಹಾನಗಲ್ಲ ಕುಮಾರ ಶಿವಯೋಗಿಗಳ ಕನಸು ನನಸಾಗಿಸಲು ಯುವ ಸ್ವಾಮಿಗಳ ಪ್ರಯತ್ನ ಮುಖ್ಯ: ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಹಾನಗಲ್ಲ ಕುಮಾರ ಶಿವಯೋಗಿಗಳ ಕನಸು ನನಸಾಗಿಸಲು ಯುವ ಸ್ವಾಮಿಗಳ ಪ್ರಯತ್ನ ಮುಖ್ಯ: ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಸೆ 18 :
ಹಾನಗಲ್ಲ ಕುಮಾರ ಶಿವಯೋಗಿಗಳು ತಮ್ಮ ಕೊನೆ ಉಸಿರು ಇರುವ ತನಕ ಸಮಾಜ ಸೇವೆ ಮಾಡಿದವರು ಅವರ ಪ್ರಯತ್ನದಿಂದಲೆ ಶಿವಯೋಗ ಮಂದಿರ ಸ್ಥಾಪನೆಯಾಗಿ ಇಂದು ನಾಡಿನ ಎಲ್ಲಾ ಮಠಾಧೀಶರಿಗೆ, ಸಾಧಕರಿಗೆ ಸರಿಯಾದ ಯೋಗ, ನಿಷ್ಠೆ, ಧಾರ್ಮಿಕ, ಅಧ್ಯಾತ್ಮಿಕದ ಬಗ್ಗೆ ಶಿಕ್ಷಣ ದೊರೆತಿರುವುದರಿಂದ ಇಂದು ಸಮಾಜದಲ್ಲಿ ನಮಗೆ ಒಳ್ಳೆಯ ಗೌರವ ಸಿಗುತ್ತದೆ ಆದ್ದರಿಂದ ಕುಮಾರೇಶ್ವರರ ಕನಸು ನನಸಾಗಿಸಲು ಶಿವಯೋಗ ಮಂದಿರದಲ್ಲಿ ಶಿಕ್ಷಣ ಪಡೆದು ನಾವೆಲ್ಲ ಪ್ರಯತ್ನ ಮಾಡಬೇಕು ಎಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೂಜ್ಯ ಶ್ರೀ ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ಗುಬ್ಬಲಗುಡ್ಡ ಮಠದಲ್ಲಿ ನಡೆದ ಹಾನಗಲ್ಲ ಕುಮಾರೇಶ್ವರ ಜಯಂತಿ ಸಮಿತಿ ವತಿಯಿಂದ ಪ್ರಸಕ್ತ ವಿಧ್ಯಾಮಾನ ಹಾಗೂ ಯುವ ಸಾಧಕರ ಕರ್ತವ್ಯದ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿ ಇಂದು ಬಹುತೇಕ ಯುವ ಸ್ವಾಮಿಗಳಿಗೆ ಸದೃಢ ಮಠಗಳು ಇರುವುದರಿಂದ ನಾವೆಲ್ಲರು ಹಾನಗಲ್ಲ ಕುಮಾರ ಶಿವಯೋಗಿಗಳು ತಮ್ಮ ಜೀವಿತ ಅವಧಿಯಲ್ಲಿ ಸಮಾಜದ ಏಳ್ಗೆಯ ಬಗ್ಗೆ ಹಾಕಿಕೊಂಡ ಗುರಿಗಳ ಬಗ್ಗೆ ಗಮನ ಹರಿಸಬೇಕು. ಹಾನಗಲ್ಲ ಕುಮಾರ ಶಿವಯೋಗಿಗಳ ಋಣ ತೀರಿಸಲು ಯಾವ ಸಾಧಕರಿಗೂ ಸಾಧ್ಯವಿಲ್ಲ. ಸಾಧಕರಾದ ನಾವೆಲ್ಲರು ಸಮಾಜದ ಏಳಿಗೆಯ ಬಗ್ಗೆ ಸ್ಪಷ್ಟವಾದ ಗುರಿಯನ್ನು ಹೊಂದಿರಬೇಕು ನಮ್ಮ ಆಧ್ಯಾತ್ಮಿಕ ಮತ್ತು ಧಾರ್ಮಿಕ ಭಾವನೆಗಳು ಸ್ಪಷ್ಟವಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಿ-ಹಂದಿಗುಂದ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು, ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿ ಮಠ ಹಾವೇರಿ, ಡಾ|| ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ ಬೆಳಗಾವಿ, ಡಾ|| ಮಹಾಂತಪ್ರಭು ಮಹಾಸ್ವಾಮಿಗಳು ವಿರಕ್ತಮಠ ಶೇಗುಣಿಸಿ, ಶಿವಬಸವ ಮಹಾಸ್ವಾಮಿಗಳು ಅಕ್ಕಿಆಲೂರು, ಶಿವಕುಮಾರ ಮಹಾಸ್ವಾಮಿಗಳು ವಿರಕ್ತಮಠ ನರಗುಂದ, ಶಿವಬಸವ ಮಹಾಸ್ವಾಮಿಗಳು ಹುಕ್ಕೇರಿ, ಗುರುದೇವರು ಕಮತೇಟ್ಟಿ ಹಾಗೂ ಹಾನಗಲ್ಲ ಕುಮಾರೇಶ್ವರ ಜಯಂತಿ ಮಹೋತ್ಸವದ ಸರ್ವ ಸಾಧಕರು ಹಾಜರಿದ್ದರು.