RNI NO. KARKAN/2006/27779|Sunday, June 15, 2025
You are here: Home » breaking news » ಘಟಪ್ರಭಾ:ರಾಜ್ಯ ಹೆದ್ದಾರಿ ಮೇಲೆ ಚಿನ್ನದ ವ್ಯಾಪಾರಿ ಅಡ್ಡಗಟ್ಟಿ ಅರ್ಧ ಕೆ.ಜಿ ಬಂಗಾರ 2.80ಲಕ್ಷ ಹಣ ದರೋಡೆ !

ಘಟಪ್ರಭಾ:ರಾಜ್ಯ ಹೆದ್ದಾರಿ ಮೇಲೆ ಚಿನ್ನದ ವ್ಯಾಪಾರಿ ಅಡ್ಡಗಟ್ಟಿ ಅರ್ಧ ಕೆ.ಜಿ ಬಂಗಾರ 2.80ಲಕ್ಷ ಹಣ ದರೋಡೆ ! 

ರಾಜ್ಯ ಹೆದ್ದಾರಿ ಮೇಲೆ ಚಿನ್ನದ ವ್ಯಾಪಾರಿ ಅಡ್ಡಗಟ್ಟಿ ಅರ್ಧ ಕೆ.ಜಿ ಬಂಗಾರ 2.80ಲಕ್ಷ ಹಣ ದರೋಡೆ !
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಸೆ 17 :
ಚಿನ್ನದ ವ್ಯಾಪಾರಿಗಳಿಬ್ಬರು ಗೋಕಾಕದಿಂದ ಬೈಕ್ ಮೇಲೆ ಶಿಂಧಿಕುರಬೇಟ ಗ್ರಾಮಕ್ಕೆ ಬರುತ್ತಿರುವಾಗ 8 ಜನರು ಡಕಾಯಿತರ ತಂಡ ವ್ಯಾಪಾರಿಗಳನ್ನು ರಾಜ್ಯ ಹೆದ್ದಾರಿ ಮೇಲೆ ಅಡ್ಡಗಟ್ಟಿ ಹಲ್ಲೆ ಮಾಡಿ ಅರ್ಧ ಕೆ.ಜಿ ಬಂಗಾರ ಹಾಗೂ 2.80ಲಕ್ಷ ನಗದು ಹಣ ದರೋಡೆ ಮಾಡಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯರಾತ್ರಿಯೇ ಪ್ರಕರಣ ದಾಖಲಾಗಿದ್ದು ಹಲ್ಲೆಗೊಳಗಾದ ಚಿನ್ನದ ವ್ಯಾಪಾರಿಗಳು ಘಟಪ್ರಭಾದ ಕೆಎಚ್‍ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿನ್ನದ ವ್ಯಾಪಾರಿಗಳಾದ ಸಂಜೀವ ಸದಾನಂದ ಪೋತದಾರ ಮತ್ತು ಆತನ ಸಹೋದರ ರವೀಂದ್ರ ಸದಾನಂದ ಪೋತದಾರ ಗೋಕಾಕದಲ್ಲಿರುವ ತಮ್ಮ ಅಂಗಡಿ ಬಂದ್ ಮಾಡಿ ತಮ್ಮ ಸ್ವಗ್ರಾಮ ಶಿಂಧಿಕುರಬೇಟಕ್ಕೆ ಬರುವಾಗ ರಾತ್ರಿ 8.30ರ ಸುಮಾರಿಗೆ ಘಟಪ್ರಭಾ ಸಕ್ಕರೆ ಕಾರ್ಖಾನೆ ಹತ್ತಿರವಿರುವ ಕರಿಯಮ್ಮ ದೇವರ ಗುಡಿಯ ಹತ್ತಿರ ರಾಜ್ಯ ಹೆದ್ದಾರಿ ಮೇಲೆ 4 ಬೈಕುಗಳ ಮೇಲೆ 8 ಜನ ದರೋಡೆಕಾರರು ಚಿನ್ನದ ವ್ಯಾಪಾರಿಗಳ ಬೈಕನ ಹಿಂದೆ ಮತ್ತು ಮುಂದೆ ಬಂದು ಅಡ್ಡಗಟ್ಟಿ ಅವರ ಕೈಯಲ್ಲಿರುವ ಬ್ಯಾಗನ್ನು ಕಸಿದುಕೊಂಡಿದ್ದಾರೆ ವಿರೋಧಿಸಿದಾಗ ಚಿನ್ನದ ವ್ಯಾಪಾರಿಯ ಒಬ್ಬನ ತಲೆಗೆ ಕಬ್ಬಿಣ ರಾಡಿನಿಂದ ಹಲ್ಲೆ ಮಾಡಿದ್ದಾರೆ ಮತ್ತೊಬ್ಬನ ಕಿವಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಇಂದು ಮುಂಜಾನೆ ಎಸ್‍ಪಿ ಸಂಜೀವಕುಮಾರ ಪಾಟೀಲ, ಎಡಿಷನಲ್ ಎಸ್‍ಪಿ ಮಹಾನಿಂಗ ನಂದಗಾಂವಿ, ಡಿವೈಎಸ್‍ಪಿ ಬಸವರಾಜ ಎಲಿಗಾರ, ಸಿಪಿಐ ಶ್ರೀಶೈಲ ಬ್ಯಾಕೂಡ, ಭೇಟಿ ನೀಡಿದ್ದರು. ಹಾಗೂ ಜಿಲ್ಲಾ ಶ್ವಾನದಳವು ಬಂದು ತಪಾಸಣೆ ನಡೆಸಿದೆ. ಆದರೆ ಆರೋಪಿಗಳ ಬಗ್ಗೆ ಇನ್ನು ಯಾವುದೆ ಮಾಹಿತಿ ಸಿಕ್ಕಿಲ್ಲವೆಂದು ತಿಳಿದುಬಂದಿದೆ.
ರಾಜ್ಯ ಹೆದ್ದಾರಿ ಮೇಲೆ ನೂರಾರು ವಾಹನಗಳು ತಿರುಗುತ್ತಿರುವ ಸಂದರ್ಭದಲ್ಲೆಯೆ ಈ ರೀತಿ ಕಳ್ಳತನದ ದರೋಡೆ ನಡೆದಿರುವುದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾದಾನ ವ್ಯಕ್ತ ಪಡಿಸುತ್ತಿದ್ದಾರೆ.
ಹೆಚ್ಚುತ್ತಿರುವ ಕಳ್ಳತನ:- ಇತ್ತೀಚಿನ ದಿನದಲ್ಲಿ ಘಟಪ್ರಭಾ ಸುತ್ತ-ಮುತ್ತ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಮನೆ ಕಳ್ಳತನ , ಅಂಗಡಿ ಕಳ್ಳತನ ಸಾಕಷ್ಟು ನಡೆದಿವೆ ಅಲ್ಲದೆ ಸಂಜೆ ಮತ್ತು ಮುಂಜಾನೆ ಸಮಯದಲ್ಲಿ ಮಹಿಳೆಯರು ಒಬ್ಬರೆ ವಾಕಿಂಗ್ ಹೋದರೆ ಅವರ ಕೊರಳಿನಲ್ಲಿರುವ ಮಂಗಳಸೂತ್ರವನ್ನೆ ಕತ್ತರಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಮನೆ ಹೊರಗಡೆ ಮತ್ತು ರಸ್ತೆ ಪಕ್ಕದಲ್ಲಿ ನಿಲ್ಲಿಸುವ ಬೈಕ್‍ಗಳು ಕಳ್ಳತನವಾಗುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಬೆರಳಣೆಕೆ ಪ್ರಕರಣಗಳನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ ಮತ್ತೆ ಎಲ್ಲಾರನ್ನು ಏನಾದರು ಕಾರಣ ಹೇಳಿ ವಾಪಸು ಕಳಿಸುತ್ತಿದ್ದಾರೆ.
ಮೇಲ್ದರ್ಜೆಗೇರಿಸಿದರು ಪ್ರಯೋಜನವಿಲ್ಲ:- ಕಳೆದ ಎರಡು ವರ್ಷಗಳಿಂದ ಘಟಪ್ರಭಾ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಓರ್ವ ಪಿಐ ಅಧಿಕಾರಿ, 4 ಜನ ಎಸ್‍ಐಗಳನ್ನು ಮತ್ತು ಹೆಚ್ಚುವರಿ ವಾಹನಗಳನ್ನು ಸರಕಾರ ನೀಡಿದರು ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಎಸ್‍ಪಿಯವರ ಆದೇಶದ ಮೇಲೆ ಬೀಟ್ ಗ್ರೂಪ್ ಮಾಡಿದ್ದರು ಸಹ ಇದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಯಾವುದೇ ಮಾಹಿತಿ ವಿನಿಮಯವಾಗುತ್ತಿಲ್ಲ. ಸಾರ್ವಜನಿಕರು ಕಳ್ಳತನಕ್ಕೆ ಕಡಿವಾಣ ಹಾಕದ ಪೊಲೀಸರ ಬಗ್ಗೆ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸುತ್ತಾ ಅವರ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದ್ದು ಇನ್ನಾದರು ಎಚ್ಚೆತ್ತುಕೊಳ್ಳುತ್ತಾರ ಎನ್ನುವುದನ್ನು ಕಾದು ನೋಡಬೇಕಾಗಿದೆ.

Related posts: