ಗೋಕಾಕ:ಶರಣರ ಅನುಭಾವಗಳನ್ನು ಹಂಚಿಕೊಂಡು ನೆಮ್ಮದಿಯ ಬದುಕು ಸಾಗಿಸಲು ಸತ್ಸಂಗ ಸುಲಭ ಮಾರ್ಗ : ಶರಣ ಐ.ಆರ್.ಮಠಪತಿ

ಶರಣರ ಅನುಭಾವಗಳನ್ನು ಹಂಚಿಕೊಂಡು ನೆಮ್ಮದಿಯ ಬದುಕು ಸಾಗಿಸಲು ಸತ್ಸಂಗ ಸುಲಭ ಮಾರ್ಗ : ಶರಣ ಐ.ಆರ್.ಮಠಪತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 13 :
ಶರಣರ ಅನುಭಾವಗಳನ್ನು ಹಂಚಿಕೊಂಡು ನೆಮ್ಮದಿಯ ಬದುಕು ಸಾಗಿಸಲು ಸತ್ಸಂಗ ಸುಲಭ ಮಾರ್ಗವಾಗಿದ್ದು, ಮಾನವ ವಚನಗಳನ್ನು ಅರಿತು ನಡೆದರೆ ಬದುಕು ಪಾವನ ವಾಗುತ್ತದೆ ಎಂದು ಶರಣ ಐ.ಆರ್.ಮಠಪತಿ ಹೇಳಿದರು
ರವಿವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶರಣ ವಚನಗಳನ್ನು ಅರಿತು ನಡೆದರೆ ಜೀವನ ಸಾರ್ಥಕವಾಗುತ್ತದೆ. ಆಧುನಿಕ ಭರಾಟೆಯಲ್ಲಿ ನಾವು ಹಳೆಯದನ್ನು ಮರೆಯಬಾರದು ಸಾರ್ಥಕ ಬದುಕು ನಡೆಸಲು ಶರಣರಂತೆ ಎಲ್ಲರೂ ನಡೆ-ನುಡಿಯನ್ನು ಒಂದಾಗಿಸಿಕೊಳ್ಳಬೇಕು.ಹಣೆಯ ಮೇಲೆ ವಿಭೂತಿ ಧರಿಸಿದ ಮಾತ್ರಕ್ಕೆ ಯಾರೂ ಶರಣರು ಎನಿಸಿಕೊಳ್ಳುವುದಿಲ್ಲ. ನುಡಿದಂತೆ ನಡೆಯುವವರು ನಿಜವಾದ ಶರಣರು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ವಿವಿಧ ರೋಗಗಳಿಂದ ಬಳಲುತ್ತಿರುವ ಸಮಾಜದ ಸ್ವಾಸ್ಥ್ಯ ಕಾಪಾಡಲು ಶರಣರ ವಚನ ಸಾಹಿತ್ಯ ದಿವ್ಯ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿಯೊಬ್ಬರು ವಚನವನ್ನು ಕೇವಲ ಓದದೆ ಅದರ ತತ್ವ, ಸಾರದಂತೆ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ವಹಿಸಿದ್ದರು.
ಡಾ.ಅಶೋಕ ಮುರಗೋಡ 60ರ ನಂತರ ಆರೋಗ್ಯ ರಕ್ಷಣೆ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರವಚನಕಾರರನ್ನು ಸತ್ಕರಿಸಿ , ಗೌರವಿಸಲಾಯಿತು.
ವೇದಿಕೆಯಲ್ಲಿ ಬೆಳಗಾವಿ ಮಹಾ ನಗರ ಪಾಲಿಕೆ ನಗರಯೋಜನೆ ಉಪ ನಿರ್ದೇಶಕ ಬಸವರಾಜ ಹಿರೇಮಠ, ವೇದಿಕೆ ಅಧ್ಯಕ್ಷ ಬಸವರಾಜ ಮುರಗೋಡ ಇದ್ದರು.
ಶಿವಪ್ಪ ಧರಿಗೌಡರ ಸ್ವಾಗತಿಸಿದರು, ಯಲ್ಲಪ್ಪ ಕುರುಬಗಟ್ಟಿ ನಿರೂಪಿಸಿದರು, ಸುರೇಶ್ ವಾಲಿ ವಂದಿಸಿದರು.