ಗೋಕಾಕ:ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಚಿವ ರಮೇಶ ಜಾರಕಿಹೊಳಿ ಚಾಲನೆ
ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಚಿವ ರಮೇಶ ಜಾರಕಿಹೊಳಿ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 16 :
ಇಡೀ ಜಗತ್ತನ್ನೆ ತಲ್ಲಣಗೊಳಿಸಿದ ಮಹಾಮಾರಿ ಕೋರೋನಾ ವೈರಸ್ಗೆ ಲಸಿಕೆಯನ್ನು ಕಂಡು ಹಿಡಿಯುವ ಮೂಲಕ ವೈದ್ಯಕೀಯ ವಿಜ್ಞಾನಿಗಳು ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಉತ್ತುಂಗಕ್ಕೆ ಏರಿಸಿದ್ದಾರೆಂದು ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ವಿಜ್ಞಾನಿಗಳು ವಾಕ್ಸಿನ್ ಸಂಶೋಧನೆಯಲ್ಲಿ ಯಶಸ್ವಿಯಾಗಿರುವುದು ಮಹಾನ ಸಾಧನೆಯಾಗಿದೆ ಎಂದು ತಿಳಿಸಿದರು.
ಕೊರೋನಾ ಮಹಾಮಾರಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ಹಿನ್ನಡೆಯಾದರೂ ಪ್ರಧಾನಿ ಮೋದಿಯವರ ದಕ್ಷ ಆಡಳಿತದಿಂದ ದೇಶ ಆರ್ಥಿಕವಾಗಿ ಸುಧಾರಣೆಯಾಗುತ್ತಿದೆ. ರಾಜ್ಯದಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯವನ್ನು ಮುನ್ನಡೆಸುವಲ್ಲಿ ಸಫಲರಾಗಿದ್ದಾರೆ. ದೇಶದ ಎಲ್ಲ ಜನತೆಗೆ ಈ ವಾಕ್ಸಿನ್ನ್ನು ವಿತರಿಸುವ ಗುರಿಯೊಂದಿಗೆ ಪ್ರಧಾನಿಯವರು ಕಾರ್ಯ ಪ್ರವೃತ್ತರಾಗಿದ್ದು, ಜನತೆ ಸಹಕರಿಸುವಂತೆ ಕೋರಿದ ಅವರು ಕೋವಿಡ್ನ ಸಂಕಷ್ಟದ ದಿನಗಳಲ್ಲಿ ತಮ್ಮ ಜೀವದ ಹಂಗು ತೊರೆದು ಜನರ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿದ ಕೋರೋನಾ ವಾರಿಯರ್ಸ್ಗಳನ್ನು ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ನಗರ ಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಇಓ ಬಸವರಾಜ ಹೆಗ್ಗನಾಯಕ, ಬಿಇಓ ಜಿ.ಬಿ.ಬಳಗಾರ, ಪೌರಾಯುಕ್ತ ಶಿವಾನಂದ ಹಿರೇಮಠ, ಟಿಎಚ್ಓ ಡಾ. ಎಮ್.ಎಸ್,ಕೊಪ್ಪದ, ಸಿಎಚ್ಓ ಡಾ. ರವೀಂದ್ರ ಆಂಟಿನ್, ಡಾ. ಆರ್.ಎಸ್.ಬೆಣಚಿನಮರಡಿ, ಡಾ. ಮಹೇಶ ಕೋಣಿ, ಡಾ. ಗೋಪಾಲ ವಾಘಮೋಡೆ, ಡಾ. ಬಿ.ಎಚ್.ಬಾಗಲಕೋಟೆ, ಡಾ. ಸಂಪತಕುಮಾರ ಸೇರಿದಂತೆ ಅನೇಕರು ಇದ್ದರು.