ಗೋಕಾಕ:ಬ್ಲ್ಯಾಕ್ಮೇಲ್ ಆರೋಪ : ಬಿಜೆಪಿ ಮುಖಂಡ ಸೇರಿ ಇಬ್ಬರ ಮೇಲೆ ಪ್ರಕರಣ ದಾಖಲು
ಬ್ಲ್ಯಾಕ್ಮೇಲ್ ಆರೋಪ : ಬಿಜೆಪಿ ಮುಖಂಡ ಸೇರಿ ಇಬ್ಬರ ಮೇಲೆ ಪ್ರಕರಣ ದಾಖಲು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 9 :
ನಗರದ ಡಾ. ಹೊಸಮನಿ ಅವರ ನವಜೀವನ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಓರ್ವನು ಸಾವನ್ನಪ್ಪಿದ್ದಾನೆಂದು ಆರೋಪಿಸಲಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ಬಿಜೆಪಿ ಮುಖಂಡ ಹಾಗೂ ಇನ್ನೊಬ್ಬನ ಮೇಲೆ ಬ್ಲ್ಯಾಕ್ಮೇಲ್ದ ಆರೋಪ ಮಾಡಿ ಪೋಲೀಸರಿಗೆ ದೂರು ನೀಡಿದ ಘಟನೆ ಬುಧವಾರದಂದು ಜರುಗಿದೆ.
ಕಳೆದ ದಿ. 29 ರಂದು ತಾಲೂಕಿನ ಉಪ್ಪಾರಟ್ಟಿ ಗ್ರಾಮದ ರಾಮಚಂದ್ರ ಹರಿಜನ ಎಂಬವನು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆಂದು ಆಸ್ಪತ್ರೆ ವಿರುದ್ಧ ನಗರ ಪೋಲೀಸ ಠಾಣೆಗೆ ದೂರು ನೀಡಲಾಗಿತ್ತು. ಈ ಸಂಬಂಧವಾಗಿ ಡಾ. ಶ್ರೀಶೈಲ ಮಲ್ಲಿಕಾರ್ಜುನ ಹೊಸಮನಿ ಅವರು ಪೋಲೀಸರಿಗೆ ಪ್ರತಿದೂರು ನೀಡಿ ಕಳೆದ ದಿ. 5ರಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ ಹಾಗೂ ಮತ್ತೊಬ್ಬ ಮುಖಂಡ ಹಣಮಂತ ದುರ್ಗನ್ನವರ ಅವರು ಆಸ್ಪತ್ರೆಗೆ ಬಂದು ನಿಮ್ಮ ಮೇಲೆ ಗೋಪಾಲ ರಾಮಚಂದ್ರ ಹರಿಜನ ಇವನು ತನ್ನ ತಂದೆ ತೀರಿಕೊಂಡ ಬಗ್ಗೆ ನಿಮ್ಮ ಮೇಲೆ ದಾಖಲಿಸಿದ ದೂರನ್ನು ರಾಜೀ ಮಾಡಿಸುತ್ತೇವೆ. ನಮಗೆ 2ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಾಗ ಅದಕ್ಕೆ ನಾನು ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ, ನಾವೇಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದಾಗ ಆರೋಪಿತರಿಬ್ಬರು ಆಸ್ಪತ್ರೆಯಲ್ಲಿ ಇದ್ದ ರೋಗಿಗಳಿಗೆ ಉಪಚಾರ ಮಾಡದಂತೆ ಅಡೆತಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ನಿಮ್ಮಿಂದ ಯಾವ ರೀತಿ ಹಣ ವಸೂಲು ಮಾಡಬೇಕು ಎನ್ನುವದು ನಮಗೆ ಗೊತ್ತು ಎಂದು ಹೇಳುತ್ತ ಜೀವದ ಧಮಕಿ ಹಾಕಿದ್ದಾರೆಂದು ಡಾ. ಹೊಸಮನಿ ಅವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.