ಗೋಕಾಕ:ಪರಿಸರವಿಲ್ಲದೇ ಜೀವಿಗಳು ಬದುಕಲು ಸಾಧ್ಯವಿಲ್ಲ : ಲಖನ ಜಾರಕಿಹೊಳಿ
ಪರಿಸರವಿಲ್ಲದೇ ಜೀವಿಗಳು ಬದುಕಲು ಸಾಧ್ಯವಿಲ್ಲ : ಲಖನ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 11 :
ಪರಿಸರ ನಮಗೆ ದೇವರು ಕೊಟ್ಟ ವರದಾನವಾಗಿದ್ದು, ಪರಿಸರವಿಲ್ಲದೇ ಜೀವಿಗಳು ಬದುಕಲು ಸಾಧ್ಯವಿಲ್ಲ, ಅದರ ರಕ್ಷಣೆ ನಮ್ಮೆಲ್ಲರ ಮಹತ್ತರ ಜವಾಬ್ದಾರಿಗಳಲ್ಲಿ ಒಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ಲಖನ ಜಾರಕಿಹೊಳಿ ಹೇಳಿದರು.
ಗುರುವಾರದಂದು ಇಲ್ಲಿಯ ವಿದ್ಯಾ ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ಅವರು ಹುಟ್ಟು ಹಬ್ಬದ ನಿಮಿತ್ಯ ಲಖನ ಜಾರಕಿಹೊಳಿ ಅಭಿಮಾನಿ ಬಳಗದವರು ಹಮ್ಮಿಕೊಂಡ ಸಸಿ ನೆಡುವ ಹಾಗೂ ಬಡವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಾನವ ಪರಿಸರದ ನಾಶವನ್ನು ಮಾಡುತ್ತಿರುವುದರಿಂದ ಇಂದು ಪ್ರಕೃತಿ ವಿಕೋಪಗಳಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟು, ಸಸಿಗಳನ್ನು ನೆಟ್ಟು, ಅರಣ್ಯ ಸಂಪತ್ತನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾದ ಕರ್ತವ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ತಿಳಿಸಿದರು.
ಮಹಾಮಾರಿ ಕೊರೋನಾ ಇಡೀ ಜಗತ್ತಿಗೆ ಅಪ್ಪಳಿಸಿ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಜನತೆ ಈ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ, ಆರೋಗ್ಯ ಇಲಾಖೆ ನೀಡಿದ ನಿರ್ದೇಶನಗಳನ್ನು ಪಾಲಿಸಿ, ನಿಮ್ಮ ಕಷ್ಟ ಸುಖಗಳಿಗೆ ನಮ್ಮ ಸ್ಪಂದನೆ ಸದಾ ಇರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಎಮ್.ಗೋಕಾಕ, ಭಗವಂತ ಹುಳ್ಳಿ, ಸಂತೋಷ ಮಂತ್ರಣ್ಣವರ, ಪ್ರಕಾಶ ಮುರಾರಿ, ಎಪಿಎಮ್ಸಿ ನಿದೇಶಕ ಬಸವರಾಜ ಸಾಯಣ್ಣವರ, ಮುಖಂಡರಾದ ಆಶೋಕ ಸಾಯಣ್ಣವರ, ಸದಾನಂದ ಕಲಾಲ, ಸಂಜಯ ಜಡಿನವರ, ಬಸವರಾಜ ದೇಶನೂರ, ಅನೀಲ ಮುರಾರಿ, ಆನಂದ ಮಗದುಮ್ಮ, ರಾಮ ಬಡೆಪ್ಪಗೋಳ, ವಿವೇಕ ಜತ್ತಿ, ವಿಜಯ ಜತ್ತಿ, ಎ.ಎ.ಶಾಬಾಶಖಾನ ಬಸವರಾಜ ಮಾಳಗಿ ಸೇರಿದಂತೆ ಅನೇಕರು ಇದ್ದರು.
ನಗರದ ಯಾವುದೇ ಭಾಗದಲ್ಲಿ 24 ಗಂಟೆ ನೀರು ಪೂರೈಕೆ ಇಲ್ಲ ಲಖನ್ ಆರೋಪ :
ನಗರದಲ್ಲಿ 24/7 ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಸಂಪೂರ್ಣ ವಿಫಲವಾಗಿದ್ದರೂ ಜನರಿಂದ ಹೆಚ್ಚಿನ ನೀರಿನ ಕರ ವಸೂಲಿಗೆ ಇಳಿದಿರುವುದು ದುರ್ದೈವದ ಸಂಗತಿಯಾಗಿದೆ. ನಗರದ ಯಾವುದೇ ಭಾಗದಲ್ಲಿ 24 ಗಂಟೆ ನೀರು ಪೂರೈಕೆ ಇಲ್ಲ. ಈ ಹಿಂದೆ ಇದ್ದಂತೆಯೇ ದಿನಕ್ಕೆ ಒಂದು ಸಾರೆ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಫಿಲ್ಟರ್ ಸಹ ಸರಿಯಾಗಿ ಮಾಡುತ್ತಿಲ್ಲ. ಹೀಗಿದ್ದರೂ 24/7 ನೀರು ಎಂದು ನೀರಿನ ಕರ ವಸೂಲು ಮಾಡುತ್ತಿರುವದು ಹಗಲು ದರೋಡೆಯಾಗಿದೆ. ಈಗ ವಸೂಲು ಮಾಡುತ್ತಿರುವ ನೀರಿನ ಕರದಲ್ಲಿ ಶೇ. 75ರಷ್ಟು ಕಡಿಮೆ ಮಾಡಲು ಅವಕಾಶವಿದ್ದು ಅದನ್ನು ಕಡಿತಗೊಳಿಸಬೇಕು. ಈಗಾಗಲೇ ನಗರದ ಜನತೆ ನೆರೆ ಹಾಗೂ ಕೊರೋನಾದಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಕಾರ್ಯ ನಿಮ್ಮಿಂದ ಆಗದಿದ್ದರೇ ನಮಗೆ ನಗರಸಭೆಯ ಅಧಿಕಾರ ನಮಗೆ ಬಿಟ್ಟುಕೊಡಿ ನಾವು ಮಾಡಿ ತೋರಿಸುತ್ತೇವೆ ಎಂದು ಆಹ್ವಾನ ನೀಡಿದ ಲಖನ್ ಜಾರಕಿಹೊಳಿ ಅವರು ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಗರದ ಜನತೆಯ ಒಳಿತಾಗಿ ನಾವು ಈ ಕಾರ್ಯ ಮಾಡುತ್ತೇವೆ ಎಂದು ಪರೋಕ್ಷವಾಗಿ ಸಚಿವ ರಮೇಶ ಜಾರಕಿಹೊಳಿ ಅವರ ಹೇಳಿಕೆ ಕುರಿತು ಕುಟುಕಿದರು.