ಬೆಟಗೇರಿ:ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ
ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಎ 2 :
ಗ್ರಾಮದ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಹಾಗೂ ಪಿಎಚ್ಸಿ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ಅವರ ಮಾರ್ಗದರ್ಶನದಲ್ಲಿ ದೇಶಾದ್ಯಂತ ಹರಡುತ್ತಿರುವ ಮಹಾಮಾರಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಮುಂಜಾಗ್ರತಾ ಕ್ರಮಗಳ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಗ್ರಾಮದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಜೊತೆ ವೈದ್ಯಕೀಯ ಶಿಕ್ಷಣದ ವಿವಿಧ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಥಳೀಯ ವಿದ್ಯಾರ್ಥಿಗಳು ಬೆಟಗೇರಿ ಗ್ರಾಮಕ್ಕೆ ಬೇರೆ ಬೇರೆ ಊರು, ನಗರ, ಪಟ್ಟಣಗಳಿಂದ ಬಂದಿರುವ ಹೋಮ್ ಕ್ವಾರಂಟೈನ್ನಲ್ಲಿರುವ ಗ್ರಾಮದ ಜನರ ಮನೆ ಮನೆಗೆ ಪ್ರತಿ ದಿನ ಭೇಟಿ ನೀಡಿ ಅವರ ಆರೋಗ್ಯದ ಕುರಿತು ಮಾಹಿತಿ ಪಡೆಯುವ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸ್ಥಳೀಯ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು, ಸದಸ್ಯರು ಸ್ವಯಂ ಪ್ರೇರಿತರಾಗಿ ಕಳೆದ ಎರಡ್ಮೂರು ದಿನಗಳಿಂದ ಕರೋನಾ ಸೈನಿಕರಾಗಿ ನಿಗದಿತ ಅವಧಿಯಲ್ಲಿ ಬಾಗಿಲು ತೆರೆದ ದಿನಸಿ ಅಂಗಡಿ, ಹಾಲಿನ ಡೈರಿ, ಬ್ಯಾಂಕ್ ಸೇರಿದಂತೆ ಊರಿನ ಪ್ರಮುಖ ಸ್ಥಳಗಳಲ್ಲಿ ನಿಂತುಕೊಂಡು ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ, ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕರೊನಾ ವೈರಸ್ ನಿಯಂತ್ರಣಾ ಕ್ರಮಗಳನ್ನು ಅನುಸರಿಸುವಂತೆ ಸ್ಥಳೀಯರಲ್ಲಿ ಮನವರಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿದಿನ ಗ್ರಾಪಂ ಸಿಬ್ಬಂದಿ, ಪಿಎಚ್ಸಿ ಸಿಬ್ಬಂದಿ ಇವರಿಗೆ ಸಾಥ್ ನೀಡುತ್ತಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ಜಾರಿಯಾದ ಹಿನ್ನಲೆಯಲ್ಲಿ ಕುಲಗೋಡ ಪೊಲೀಸ್ ಠಾಣೆ ಪಿಎಸ್ಐ ಹನಮಂತ ನರಳೆ ಹಾಗೂ ಪೊಲೀಸ್ ಪೇದೆಗಳು ಗ್ರಾಮದೆಲ್ಲಡೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅನವಶ್ಯಕ ತಿರಗಾಡುವವರಿಗೆ, ದ್ವಿಚಕ್ರ ವಾಹನ ಸವಾರರಿಗೆ ಖಡಕ್ ಸೂಚನೆ ನೀಡಿ ಮನೆಯಲ್ಲಿರುವಂತೆ ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಕಿರಾಣಿ ಅಂಗಡಿ ಹಾಗೂ ಹಾಲಿನ ಡೈರಿ ಬಾಗಿಲು ತೆರೆಯುವ ನಿಗದಿತ ಅವಧಿ ಹೊರತುಪಡಿಸಿ ಕಳೆದ ಒಂಭತ್ತು ದಿನಗಳಿಂದ ಗ್ರಾಮದೆಲ್ಲಡೆ ನಿಶಬ್ಧ್ ವಾತಾವಾರಣ ಕಾಣುತ್ತಿದೆ. ಪ್ರಮುಖ ಓಣಿ ಬೀದಿ, ಸ್ಥಳಗಳು ಬಿಕೂ ಎನ್ನುತ್ತಿವೆ.