ಗೋಕಾಕ:ಮಹಾ ರಾಜ್ಯದ ಚಂಡಿಗಡದ ಕಲಾಶಿಬಿರಕ್ಕೆ ಬಸವರಾಜ ದಾರೋಜಿ ಆಯ್ಕೆ
ಮಹಾ ರಾಜ್ಯದ ಚಂಡಿಗಡದ ಕಲಾಶಿಬಿರಕ್ಕೆ ಬಸವರಾಜ ದಾರೋಜಿ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 12 :
ಕರ್ನಾಟಕ ಲಲಿತಕಲಾ ಅಕಾಡೆಮಿಯು ಉತ್ತರ ಭಾರತದ ಚಂಡಿಗಡದ (ಪಂಜಾಬ) ಲವ್ಲಿ ಪ್ರೊಫೇಶನಲ್ ಯುನಿವರ್ಸಿಟಿ ಇವರ ಸಹಭಾಗಿತ್ವದಲ್ಲಿ ಇದೇ ಫೆಬ್ರುವರಿ 17 ರಿಂದ 21, 2020 ರವರೆಗೆ ಹೊರ ರಾಜ್ಯದ ಕಲಾಶಿಬಿರ ಏರ್ಪಡಿಸಿದ್ದಾರೆ. ಈ ಶಿಬಿರದಲ್ಲಿ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಯ ಹತ್ತು ಜನ ಕಲಾವಿದರು ಪಾಲ್ಗೊಳ್ಳಲಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿಯ ಬಸವರಾಜ ದಾರೋಜಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಪ್ರಾ. ಜಯಾನಂದ ಮಾದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋಕಾಕದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಯ ಐದು ವರ್ಷಗಳ ವ್ಯಾಸಂಗಗೈದು ಅಕ್ರ್ಯಾಲಿಕ್, ತೈಲ ಹಾಗೂ ಜಲವರ್ಣದ ಬಳಕೆಯಲ್ಲಿ ಪರಿಣಿತಿಯನ್ನು ಪಡೆದಿದ್ದು, ಕಳೆದ 2018 ನೇ ಸಾಲಿನಲ್ಲಿ “ಗೋಕಾವಿ ವರ್ಣಸಿರಿ’’ ರಾಜ್ಯ ಪ್ರಶಸ್ತಿಗೆ ಭಾಜನರಾದ ಬಸವರಾಜ ದಾರೋಜಿ ಉತ್ತರ ಕರ್ನಾಟಕದ ದೇಸಿಯ ನೆಲದ ಗುಣ ಪರಿಸರ, ಹಳ್ಳಿಯ ಜನಜೀವನದ ವೃತ್ತಾಂತಗಳನ್ನು ತಮ್ಮ ಕಲಾಕೃತಿಗಳ ವಸ್ತುವನ್ನಾಗಿ ಚಿತ್ರಿಸುವುದರಲ್ಲಿ ಪಳಗಿದವರಾಗಿದ್ದು ರಾಜ್ಯದ ಬೆಳಗಾವಿ, ಬೆಂಗಳೂರು, ಕಲ್ಬುರ್ಗಿ, ರಾಯಚೂರು, ಮೈಸೂರು ಹಾಗೂ ಮುಂಬಯಿಗಳಲ್ಲಿ ಪೇಂಟಿಂಗ್ ಪ್ರದರ್ಶನ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.