ಗೋಕಾಕ:ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನನ್ನನ್ನು ಆಶೀರ್ವದಿಸಿ : ರಮೇಶ ಜಾರಕಿಹೊಳಿ

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನನ್ನನ್ನು ಆಶೀರ್ವದಿಸಿ : ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 29 :
ಯಡಿಯೂರಪ್ಪನವರ ಸಮರ್ಥ ನಾಯಕತ್ವವನ್ನು ಮೆಚ್ಚಿಕೊಂಡು ಬಿಜೆಪಿಯಿಂದ ಈ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಕ್ಷೇತ್ರದ ಸರ್ವತೋಮುಖ ಏಳ್ಗೆಗಾಗಿ ನನಗೆ ಮತ ನೀಡಿ ಆಯ್ಕೆ ಮಾಡುವಂತೆ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ತಾಲೂಕಿನ ಮದವಾಲ ಗ್ರಾಮದಲ್ಲಿ ಶುಕ್ರವಾರದಂದು ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ಧಿಯಾಗಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಕಳೆದ 20 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಬಹಳ ನಿಷ್ಠೆಯಿಂದ ಕೆಲಸ ಮಾಡಿರುವೆ. ನಿಷ್ಠಾವಂತ ಕಾರ್ಯಕರ್ತರಿಗೆ ಅಲ್ಲಿ ಸೂಕ್ತ ಬೆಲೆ ಇಲ್ಲ. ಅಲ್ಲದೇ ಪಕ್ಷದ ಕೆಲ ನಾಯಕರ ಮಿತಿಮೀರಿದ ವರ್ತನೆಯಿಂದ ಮನಸ್ಸಿಗೆ ನೋವಾಗಿದೆ. ಅದನ್ನು ನಾಯಕರುಗಳ ಮುಂದೆ ಸಾಕಷ್ಟು ಬಾರಿ ಹೇಳಿಕೊಂಡರೂ ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ. ಅಧಿಕಾರದ ಹಿಂದೆ ಎಂದೂ ಜೋತುಬಿದ್ದವನಲ್ಲ. ಜನರ ಪ್ರೀತಿ ವಿಶ್ವಾಸವೇ ನನಗೆ ಮುಖ್ಯವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆಯೇ ಹೊರತು ಯಾವುದೇ ವೈಯಕ್ತಿಕ ಸ್ವಾರ್ಥವಿಲ್ಲವೆಂದು ಹೇಳಿದರು.
ಡಿ.5 ರಂದು ನಡೆಯುವ ಚುನಾವಣೆಯಲ್ಲಿ ಶೇಜ್ ನಂ. 2 ಇದ್ದು, ಕಮಲ ಹೂವಿನ ಗುರ್ತಿಗೆ ಅಮೂಲ್ಯ ಮತ ನೀಡಿ ಆರನೇ ಬಾರಿಗೆ ಆಯ್ಕೆ ಮಾಡಿ ಆಶೀರ್ವಾದ ಮಾಡುವಂತೆ ಕೋರಿದ ಅವರು, ನೀವು ಹಾಕುವ ಮತ ನೇರವಾಗಿ ಸರ್ಕಾರಕ್ಕೆ ಹಾಕಿದಂತಾಗುತ್ತದೆ. ಯಡಿಯೂರಪ್ಪನವರ ಕೈ ಬಲಪಡಿಸಿದಂತಾಗುತ್ತದೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ಭೀಮಗೌಡ ಪೊಲೀಸ್ಪಾಟೀಲ, ರಾಜು ತಳವಾರ, ಅಡಿವೆಪ್ಪ ನಾವಲಗಟ್ಟಿ, ಮಾರುತಿ ಅಲೇಕಾರ, ಶಿವಾನಂದ ಸಿಗ್ಗಾಂವಿ, ಸಿದಗೌಡ ಪಾಟೀಲ, ನಿಂಗಪ್ಪ ಜಾಡರ, ಮಲ್ಲಪ್ಪ ನಾಯಿಕ, ಬಸವಣ್ಣಿ ತೇಲಿ, ಮಲ್ಲಪ್ಪ ಹುನ್ನೂರ, ನಿಂಗಪ್ಪ ಜಾಡರ, ರಾಮಪ್ಪ ಬಣಗಾರ, ಅಪ್ಪಯ್ಯಾ ನೇಸರಗಿ, ಶಂಕರ ವಣ್ಣೂರ, ಬಾಳೇಶ ತಿಮ್ಮಗೋಳ, ಮಹಾಂತೇಶ ಹಟ್ಟಿಗೌಡರ, ಮುಂತಾದವರು ಉಪಸ್ಥಿತರಿದ್ದರು.
ರಮೇಶ ಜಾರಕಿಹೊಳಿ ಅವರು ಪಾದಯಾತ್ರೆ ಮೂಲಕ ಮತಯಾಚಿಸಿದರು. ಕಡಬಗಟ್ಟಿ, ಕನಸಗೇರಿ, ಈರನಟ್ಟಿ, ಮುಸಲ್ಮಾರಿ, ಗೊಡಚಿನಮಲ್ಕಿ, ಮಲೇಬೈಲ್ ಗ್ರಾಮಗಳಲ್ಲಿ ರಮೇಶ ಜಾರಕಿಹೊಳಿ ಅವರು ಪ್ರಚಾರ ಸಭೆಯಲ್ಲಿ ಭಾಗವಹಿಸಿದರು.