RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ : ಗೋಕಾಕ ನಗರಸಭೆ ಭ್ರಷ್ಟಾಚಾರದ ವಿಡಿಯೋ ವೈರಲ್

ಗೋಕಾಕ:ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ : ಗೋಕಾಕ ನಗರಸಭೆ ಭ್ರಷ್ಟಾಚಾರದ ವಿಡಿಯೋ ವೈರಲ್ 

ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ : ಗೋಕಾಕ ನಗರಸಭೆ ಭ್ರಷ್ಟಾಚಾರದ ವಿಡಿಯೋ ವೈರಲ್

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 10:

 

 

ಗೋಕಾಕ ನಗರಸಭೆ ಹಿರಿಯ ಸದಸ್ಯರನ್ನು ಮತ್ತು ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಅವರನ್ನು ಗುರಿಯಾಗಿಸಿಕೊಂಡು ಬಿಡುಗಡೆ ಮಾಡಿರುವ ವಿಡಿಯೋ ಹಾಡು | ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ ಎಂಬ ಜನಪದ ಶೈಲಿಯ ಹಾಡು ಗೋಕಾಕ ಮತಕ್ಷೇತ್ರದಾದ್ಯಂತ ಪೂಲ ವೈರಲ್ ಆಗಿದೆ. ಕೆಲ ತಿಂಗಳ ಹಿಂದೆ ಪ್ರವಾಹ ಬಂದಾಗ ನಗರಸಭೆಯಿಂದ ಕೈಗೊಂಡ ಸ್ವಚ್ಚತಾ ಕಾರ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗುತ್ತಿರುವ ಹಗರಣವನ್ನು ಎತ್ತಿ ತೋರಿಸುವ ದೃಷ್ಟಿಯಿಂದ ಈ ಜನಪದ ಹಾಡನ್ನು ವಿರುದ್ಧ ವಿಡಿಯೋವನ್ನು ಎಡಿಟಿಂಗ್ ಮಾಡಲಾಗಿದೆ
ಉಪ ಚುನಾವಣೆ ಕಾಲ ಸಮಿಪಿಸುತ್ತಿರುವ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಜಾರಕಿಹೊಳಿ ಸಹೋದರರ ನಡುವಿನ ಕಲಹ ಹೆಚ್ಚಾಗುತ್ತಿದೆ.ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಅವರ ನಡುವಿನ ಮನಸ್ತಾಪಗಳು ಈಗ ಮತ್ತಷ್ಟು ಬೀದಿಗೆ ಬಂದಿದೆ.
ಇದುವರೆಗೆ ಮಾತಿನ ಏಟು, ಎದಿರೇಟು ನೀಡುತ್ತಿದ್ದ ಸತೀಶ ಜಾರಕಿಹೊಳಿ ಈಗ ಒಂದು ಹೆಜ್ಜೆ ಮುಂದೆ ಹೋಗಿ ಗೋಕಾಕ ಕ್ಷೇತ್ರದಲ್ಲಿ ತೀವ್ರ ಸಂಚಾರ ನಡೆಸುತ್ತಿದ್ದಾರೆ. ಅಷ್ಟೇಯಲ್ಲ ರಮೇಶ ಅವರ ಅಳಿಯ ಅಂಬಿರಾವ್ ಪಾಟೀಲ ಹಾಗೂ ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಹೊಸದೊಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಶಿಶುನಾಳ ಷರೀಫ ಅವರು ಬರೆದಿರುವ ‘ಗುಡಿಯ ನೋಡಿರಣ್ಣ ದೇಹದ ಗುಡಿಯ ನೋಡಿರಣ್ಣ’ ಹಾಡಿನ್ನು
ದಬ್ಬಮಾಡಿ ಅದೆ ಶೈಲಿಯಲ್ಲಿಯೇ ‘ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ’ ಎಂಬ ಹಾಡು ಈಗ ಭಾರಿ ವೈರಲ್ ಆಗಿದೆ. ಹಾಡಿನಲ್ಲಿ ನಗರಸಭೆಯವರು ಕೋಟಿ ಕೋಟಿ ಕೊಳ್ಳೆ ಹೊಡೆದಿರುವುದು, ಪ್ರವಾಹ ಬಂದು ನಗರಕ್ಕೆ ಅಪ್ಪಳಿಸಿದಾಗ ಜನರು ಅನುಭವಿಸಿದ ಸಂಕಷ್ಟ, ಪ್ರವಾಹ ಸಂತ್ರಸ್ತರಿಗೆ ನೀಡಿದ ಪರಿಹಾರದಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದ ನುಡಿಗಳು ಹಾಡಿನಲ್ಲಿವೆ. ಪಕ್ಕಾ ಜನಪದ ಶೈಲಿಯಲ್ಲಿಯೇ ಈ ಹಾಡನ್ನು ರಚನೆ ಮಾಡಲಾಗಿದೆ. ಗೋಕಾಕ ನಗರಸಭೆಯ ಭ್ರಷ್ಟಾಚಾರದ ಕರ್ಮ ಕಾಂಡ ಎಂದು ತಲೆ ಬರಹ ಕೊಟ್ಟು ವಿಡಿಯೋ ಹಾಡನ್ನು ಮಾಡಲಾಗಿದೆ. ಈ ಹಾಡನ್ನು ಸ್ಥಳೀಯ ಕಲಾವಿದ ಗುರುಪಾದ ಮದನ್ನವರ ಅವರ ಕಂಠಸಿರಿಯಲ್ಲಿ ಮೂಡಿ ಬಂದಿದೆ
– ಹಾಡಿನ ಪ್ರಮುಖ ಅಂಶಗಳು ಹೀಗಿವೆ.
ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ
ಗೋಕಾವಿ ನಾಡಿನ ನಗರ ಸಭೆಯವ್ರ ಕೋಟಿ ಕೋಟಿ ಕೊಳ್ಳೆ ಹೊಡೆದಾರೋ ಹಣ
ಹೊಳೆಯು ಬಂದು ಹೊಕ್ಕಿ, ಜನರು ಅಳತಿದ್ರು ಬಿಕ್ಕಿ ಬಿಕ್ಕಿ
ಸಹಾಯ ಮಾಡಲು ಬಂದರು ಸಾಗಿ.. ದುಪ್ಪಟ್ಟು ಹಣವನು ತಿಂದ್ರು ತೇಗಿ
ಒಂದು ಎರಡು ಗಾಡಿ ಸಹಾಯ ಮಾಡಿದಂಗ ಮಾಡಿ, ಜನರ ಕಣ್ಣಿಗೆ ಮಣ್ಣೆರಚಾರೋ ಪುಡಿ
ನಗರಸಭೆ ಕೆಲ ಸದಸ್ಯರೆಲ್ಲ ರಾಜಕಾರಣಿಗಳ ಜೊತೆ ಕೂಡಿ… ಹೀಗೆ ಹಾಡು ಸಾಗುತ್ತದೆ.
ಇಷ್ಟು ಮಾತ್ರವಲ್ಲ, ಹಾಡಿನ ವಿಡಿಯೋ ಆರಂಭವಾಗುತ್ತಿದ್ದಂತೆ ನಗರಸಭೆಯವರು ಒಂದು ಟ್ರಿಪ್ ಟ್ರ್ಯಾಕ್ಟರ್ ಬಾಡಿಗೆ ₹೪೦೦ ಕೊಟ್ಟು ₹೧೨೦೦ ಖರ್ಚು ಹಾಕಿದ್ದಾರೆ. ತಲಾ ₹೮೦೦ನಂತೆ ₹೮೦ ಲಕ್ಷ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರಂಭದಲ್ಲೇ ಶಾಸಕ ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಮತ್ತು ನಗರಸಭೆ ಹಿರಿಯ ಸದಸ್ಯ ಕೋತವಾಲ ಫೋಟೊ ಹಾಕಲಾಗಿದೆ.

ಉಪಚುನಾವಣೆಯ ಮೇಲೆ ಕಣ್ಣು:
ರಮೇಶ ಜಾರಕಿಹೊಳಿ ಅವರನ್ನು ಅನರ್ಹಗೊಳಿಸಿದ ನಂತರ ಚುನಾವಣಾ ಆಯೋಗ ಡಿ. 5 ರಂದು ಉಪ ಚುನಾವಣೆಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ಶತಾಯಗತಾಯ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರು ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರೊಟ್ಟಿಗೆ ಕ್ಷೇತ್ರದಲ್ಲಿ ತೀವ್ರ ಪ್ರಚಾರ ನಡೆಸಿದ್ದಾರೆ. ಮಾತ್ರವಲ್ಲ ಈ ಹಾಡನ್ನು ಕೂಡ ಬಿಡುಗಡೆ ಮಾಡುವ ಮೂಲಕ ಕ್ಷೇತ್ರದ ಮತದಾರರನ್ನು ತಮ್ಮತ್ತ ಸೆಳೆಯುವ ತಂತ್ರಗಾರಿಕೆ ಅನುಸರಿಸಿದರೆ
ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಬೆಂಬಲಿಗರು ತೆರೆಮರೆಯಲ್ಲಿಯೇ ಮತದಾರರನ್ನು ತಲುಪುವ ತಂತ್ರವನ್ನು ಹೆಣೆಯುತ್ತಿದ್ದಾರೆ . ಒಟ್ಟಾರೆ ಅಧಿಸೂಚನೆ ಜಾರಿಯಾಗುವ ಮುನ್ನವೇ ಗೋಕಾಕದಲ್ಲಿ ಉಪ ಚುನಾವಣೆ ಕಾವು ಜೋರಾಗಿ ನಡೆದಿದೆ. ಕಳೆದ ಮೂರು ಅವಧಿಯಿಂದಲೂ ರಮೇಶ ಜಾರಕಿಹೊಳಿ ಅವರಿಗೆ ಪ್ರಭಲ ಪೈಪೋಟಿ ನೀಡಿದ್ದ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರು ಈ ಬಾರಿಯು ಜೆಡಿಎಸ್ ಅಥವಾ ಪಕ್ಷೇತರರಾಗಿ ಸ್ವರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ ಆದರೆ ಸರಕಾರ ಈ ಲೆಕ್ಕಾಚಾರ ತೆಲೆಕೆಳಗಾಗಿಸಿದೆ. ಪ್ರತಿಸ್ವರ್ಧಿಯಾಗಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದ ಅಶೋಕ ಪೂಜಾರಿ ಅವರನ್ನು ಸಿಎಂ ಯಡಿಯೂರಪ್ಪ ಅವರು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು , ಸರಕಾರದ ಈ ಕ್ರಮ ರಮೇಶ ಅವರ ದಾರಿಯನ್ನು ಸುಗಮವನ್ನಾಗಿಸಿದೆ ಆದರೆ ಅಶೋಕ ಪೂಜಾರಿ ಅವರು ಈ ಹುದ್ದೆಯನ್ನು ಅಷ್ಟೋಂದು ಸಲಿಸಾಗಿ ಒಪ್ಪಿಕೋಳುತ್ತಾರಾ ? ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ .
ಸತೀಶ್ ಜಾರಕಿಹೊಳಿ, ಮಾಜಿ ಸಚಿವ, ಶಾಸಕ :

ಇತ್ತೀಚೆಗೆ ಬಂದ ಪ್ರವಾಹದಿಂದ ಗೋಕಾಕ ಜನತೆ ಕಣ್ಣೀರು ಹಾಕುತ್ತಿದ್ದರು. ಆದರೆ ಗೋಕಾಕ ನಗರಸಭೆಯವರು ಚೆಲ್ಲಾಟ ಆಡುತ್ತಿದ್ದರು. ಇದರ ಸತ್ಯಾಂಶವನ್ನು ಹಾಡಿನ ರೂಪದಲ್ಲಿ ಕೊಟ್ಟಿದ್ದೇವೆ, ಲೈಕ್ ಆದ್ರೆ ಶೇರ್ ಮಾಡಿ.

Related posts: