ಗೋಕಾಕ:ತೆಲಂಗಾಣದ ಮಾದರಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿ : ಸರಕಾರಕ್ಕೆ ಮಾಜಿ ಸಚಿವ ಸತೀಶ ಆಗ್ರಹ

ತೆಲಂಗಾಣದ ಮಾದರಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿ : ಸರಕಾರಕ್ಕೆ ಮಾಜಿ ಸಚಿವ ಸತೀಶ ಆಗ್ರಹ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 9 :
ಕಳೆದ ನಾಲ್ಕು ದಿನಗಳಿಂದ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ಘಟಪ್ರಭಾ ನದಿ ಪ್ರವಾಹಕ್ಕೆ ಗುರಿಯಾಗಿರುವ ಗೋಕಾಕ ನಗರ ಭಾಗಶಃ ಜಲಾವೃತಗೊಂಡು, ಸಾವಿರಾರು ಜನರು ಸೂರನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಶುಕ್ರವಾರದಂದು ನಗರದ ಜಲಾವೃತಗೊಂಡ ಆಶ್ರಯ ಬಡಾವಣೆ ಹಾಗೂ ಮಾರ್ಕಂಡೇಯ ನದಿ ತೀರದ ಇನ್ನೂ ಪ್ರದೇಶಗಳಿಗೆ ಮಾಜಿ ಸಚಿವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ಸಾರಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 80 ರಿಂದ 90 ಸಾವಿರ ಕ್ಯೂಸೆಕ್ಸ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿತ್ತು ಆದರೆ ಈ ಸಾರಿ 1ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹಾಗೂ ಅದರ ಉಪನದಿಗಳಾದ ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರುವದರಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಇದು ನೂರ ವರ್ಷಗಳ ಇತಿಹಾಸದಲ್ಲಿ ದಾಖಲೆಯನ್ನು ಮುರಿದು ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಅಂದಾಜು 500ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಮೊದಲ ಆದ್ಯತೆಯಾಗಿ ಸರಕಾರ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಅವರು ದೈನಂದಿನ ಜೀವನ ನಡೆಸಲು ಅವರಿಗೆ ನೆರವು ನೀಡಿ ಮತ್ತೆ ಅವರು ವ್ಯಾಪಾರ, ನೌಕರಿ, ಕೆಲಸಗಳನ್ನು ಮಾಡವ ವ್ಯವಸ್ಥೆ ಮಾಡಬೇಕು. ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಸುಮಾರು 4.5 ಲಕ್ಷಕ್ಕೆ ಒಂದರಂತೆ ಮನೆಗಳನ್ನು ನಿರ್ಮಾಣ ಮಾಡಿದ ಹಾಗೆ ಇಲ್ಲಿಯ ಜನರಿಗೂ ಕೂಡಾ ಶಾಶ್ವತ ಪರಿಹಾರಕ್ಕೆ ಸರಕಾರವನ್ನು ಒತ್ತಾಯಿಸಲಾಗುವದು.
ಅತಿ ಹೆಚ್ಚು ಪ್ರಮಾಣದಲ್ಲಿ ಹಾನಿಗಿಡಾದ ಗೋಕಾಕ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬರಬೇಕಾಗಿತ್ತು ಆದರೆ ಇಲ್ಲಿಯವರೆಗೆ ಬಂದಿಲ್ಲ, ಇನ್ನೂ ಕಾಲ ಮಿಂಚಿಲ್ಲಾ ಮಾನ್ಯ ಮುಖ್ಯಮಂತ್ರಿಗಳು ಗೋಕಾಕಕ್ಕೆ ಭೇಟಿ ನೀಡಿ ಜಲಾವೃತಗೊಂಡ ಪ್ರದೇಶ ಹಾಗೂ ಬಿದ್ದಿರುವ ಮನೆಗಳ ಸಮೀಕ್ಷೆ ನಡೆಯಿಸಿ ಸೂರು ಕಳೆದುಕೊಂಡ ನಿರಾಶ್ರಿತರಿಗೆ ಶಾಶ್ವತ ಪರಿಹಾರ ದೊರಕಿಸಲು ಮುಂದಾಗಬೇಕೆಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಮನವಿ ಮಾಡಿದ್ದಾರೆ.