ಗೋಕಾಕ:ಸಮ್ಮೇಳನದ ಸಂಘಟಕರ ಕಾರ್ಯನೀತಿಯ ಬಗ್ಗೆ ಅಪಸ್ವರ : ನ್ಯಾಯವಾದಿಗಳ ಸಂಘದಿಂದ ಸಮ್ಮೇಳನ ಬಹಿಷ್ಕಾರ

ಸಮ್ಮೇಳನದ ಸಂಘಟಕರ ಕಾರ್ಯನೀತಿಯ ಬಗ್ಗೆ ಅಪಸ್ವರ : ನ್ಯಾಯವಾದಿಗಳ ಸಂಘದಿಂದ ಸಮ್ಮೇಳನ ಬಹಿಷ್ಕಾರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 27 :
ನಾಳೆಯಿಂದ ಎರಡು ದಿನ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಸಮ್ಮೇಳನದ ಸಂಘಟಕರ ಕಾರ್ಯನೀತಿಯ ಬಗ್ಗೆ ಅಪಸ್ವರ ಎದ್ದಿದ್ದು ಗೋಕಾಕ ನ್ಯಾಯವಾದಿಗಳ ಸಂಘ ಸಮ್ಮೇಳನವನ್ನು ಬಹಿಷ್ಕರಿಸಿದೆ ಎಂದು ಸಂಘದ ಅಧ್ಯಕ್ಷ ಯು.ಬಿ. ಶಿಂಪಿ ಹೇಳಿದರು.
ವಕೀಲರ ಸಂಘದ ಕಾರ್ಯಾಲಯದಲ್ಲಿ ಗುರುವಾರದಂದು ಮಧ್ಯಾನ್ಹ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ನ್ಯಾಯವಾದಿಗಳ ಸಂಘ ನಗರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎಲ್ಲಕ್ಕಿಂತ ಮುಂದಿದ್ದು ಕಾರ್ಯ ನಿರ್ವಹಿಸುತ್ತಿರುವದು ಎಲ್ಲರಿಗೂ ತಿಳಿದ ವಿಷಯ. ಆದರೂ ಸಹ ಸಮ್ಮೇಳನದ ಸಂಘಟಕರು ನ್ಯಾಯವಾದಿಗಳ ಸಂಘಕ್ಕೆ ಆಹ್ವಾನ ಪತ್ರಿಕೆ ನೀಡುವ ಸೌಜ್ಯನ್ಯವನ್ನೂ ತೋರಿಸಿರುವದಿಲ್ಲ. ಅದಕ್ಕಾಗಿ ಇಂದು ಸಂಘದ ಸಭೆ ನಡೆದು ಜಿಲ್ಲಾ ಸಮ್ಮೇಳನ ಬಹಿಷ್ಕರಿಸುವ ಹಾಗೂ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೋಕಾಕ ತಾಲೂಕಿನ ವಕೀಲರು ರಾಜ್ಯ ಸಂಘದ ಚೇರಮನ್ರು ಹಾಗೂ ನಿರ್ದೇಶಕರು ಇದ್ದರೂ ಸಹ ಅವರನ್ನು ಕರೆದು ಸತ್ಕರಿಸುವ ಗೋಜಿಗೆ ಹೋಗದಿರುವದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದ ಸಂಘದ ಅಧ್ಯಕ್ಷರು ಈ ಸಮ್ಮೇಳನದಲ್ಲಿ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಠರಾವು ಕೈಕೊಂಡು ಸರಕಾರದ ಮೇಲೆ ಒತ್ತಡ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ, ಉಪಾಧ್ಯಕ್ಷರಾದ ಎಸ್.ಎಸ್.ಪಾಟೀಲ, ವಿ.ಎಸ್.ಗಡೆನ್ನವರ, ಕಾರ್ಯದರ್ಶಿ ಎಚ್.ಬಿ.ಸಂಗಟಿ, ಸಹಕಾರ್ಯದರ್ಶಿ ಜಿ.ಎಮ್.ಬಟ್ಟಿ, ಖಜಾಂಚಿ ಸಂಜು ಹಿರಟ್ಟಿ, ಹಿರಿಯ ನ್ಯಾಯವಾದಿ ಬಿ.ಆರ್.ಕೊಪ್ಪ, ಮಾಜಿ ಅಧ್ಯಕ್ಷ ಸಿ.ಡಿ.ಹುಕ್ಕೇರಿ, ಸಿ.ಬಿ.ಗಿಡ್ಡನವರ ಇದ್ದರು.
ಸಮ್ಮೇಳನ ಸಂಘಟಕರು ಸಮ್ಮೇಳನದ ಪೂರ್ವದಲ್ಲಿ ಹಲವಾರು ಎಡವಟ್ಟುಗಳ ಮಾಡಿಕೊಂಡಿದ್ದರ ಬಗ್ಗೆ ಸಾರ್ವಜನಿಕರು ವಿಧವಿಧವಾಗಿ ಮಾತಾಡಿಕೊಳ್ಳುತ್ತಿದ್ದಾರೆ ಅಲ್ಲದೆ ಅಪಸ್ವರಗಳು ಕೇಳಿ ಬರುತ್ತಿವೆ.