ಗೋಕಾಕ:ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು : ಮಹಾಂತೇಶ ಗಾಣಿಗೇರ
ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು : ಮಹಾಂತೇಶ ಗಾಣಿಗೇರ
ಬೆಟಗೇರಿ ಜು 20 : ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು. ನಿರಂತರ ಅಧ್ಯಯನದಿಂದ ಏನೆಲ್ಲಾ ಸಾಧನೆ ಸಾಧ್ಯವಾಗುವುದು, ಶಾಲೆ ಕಲಿಯುವ ಮಕ್ಕಳಲ್ಲಿ ಸಾಧನೆಗೈಯುವ ಮನಸ್ಸು, ಛಲವಿರಬೇಕೆಂದು ಗೋಕಾಕ ತಾಲೂಕಿನ ಸುಣಧೋಳಿ ಗ್ರಾಮದ ಮೆಡಿಕಲ್ ವಿಭಾಗದ ಎಮ್ಡಿ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರ್ಯಾಂಕ್, ದೇಶಕ್ಕೆ 12ನೇ ರ್ಯಾಂಕ್ ಪಡೆದ ದಿಲ್ಲಿ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್ (ಎಮ್ಎಎಮ್ಸಿ) ವಿದ್ಯಾರ್ಥಿ ಮಹಾಂತೇಶ ಗಾಣಿಗೇರ ಹೇಳಿದರು.
ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಜುಲೈ.20 ರಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರೇರಣಾ ಕಾರ್ಯಾಗಾರ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಅವರು, ನಾಲ್ಕೈದು ಜನ ವಿದ್ಯಾರ್ಥಿಗಳು ಸೇರಿ ಒಂದು ಗುಂಪು ಮಾಡಿಕೊಂಡು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕುರಿತು ಅಧ್ಯಯನದ ಚರ್ಚೆ ಮಾಡಬೇಕು ಎಂದರು.
ಶಾಲಾ ಶಿಕ್ಷಕರ ಜೋತೆ ವಿದ್ಯಾರ್ಥಿಗಳು ಅವಿನಾಭಾವ ಸಂಬಂಧವಿರಿಸಿಕೊಂಡು, ಪಠ್ಯದ ವಿವಿಧ ವಿಷಯಗಳಲ್ಲಿರುವ ಕಠಿಣ ಪ್ರಶ್ನೆಗಳಿಗೆ ಶಿಕ್ಷಕರ ಜೋತೆ ಸಂವಾದದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿ ಪರಿಹಾರ ಕಂಡುಕೊಳ್ಳುವ ರೂಢಿ ಬೆಳಸಿಕೊಳ್ಳಬೇಕು ಎಂದು ಮಹಾಂತೇಶ ಗಾಣಗೇರ ಅವರು ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ ಅಭ್ಯಸಿಸಿದ ವಿಧಾನ, ಸಮಸ್ಯೆ ಮತ್ತು ಸಾಧನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಗಾಣಿಗೇರ ಅವರು ಮೆಡಿಕಲ್ ವಿಭಾಗದ ಎಮ್ಬಿಬಿಎಸ್ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 74 ನೇ ರ್ಯಾಂಕ್, ಎಮ್ಡಿ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರ್ಯಾಂಕ್, ದೇಶಕ್ಕೆ 12ನೇ ರ್ಯಾಂಕ್ ಪಡೆದು ನಮ್ಮ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಹಾಂತೇಶ ಅವರ ವಿದ್ಯಾರ್ಥಿ ಜೀವನ, ಮೆಡಿಕಲ್ ವಿಭಾಗದಲ್ಲಿಯ ಸಾಧನೆ ಹಾಗೂ ಪ್ರೇರಣಾ ಕಾರ್ಯಾಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿ ಉಪನ್ಯಾಸಕ ಮಹಾಂತೇಶ ಗಾಣಿಗೇರ ಅವರನ್ನು ಸ್ಥಳೀಯ ಪ್ರೌಢ ಶಾಲೆಯ ಪರವಾಗಿ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ಕುತುಬು ಮಿರ್ಜಾನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ರಾಕೇಶ ನಡೋಣಿ, ವಿ.ಬಿ.ಬಿರಾದರ, ಎ.ಬಿ.ತಾಂವಶಿ, ಶುಭಾ.ಬಿ., ಜಯಶ್ರೀ ಇಟ್ನಾಳ, ವೀಣಾ ಹತ್ತಿ, ಮಲ್ಲಿಕಾರ್ಜುನ ಹಿರೇಮಠ, ಮಲ್ಹಾರಿ ಪೋಳ, ರಮೇಶ ಬುದ್ನಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ಎಸ್ಡಿಎಮ್ಸಿ ಸದಸ್ಯರು, ಶಾಲೆಯ ಎಲ್ಲ ತರಗತಿಯ ವಿದ್ಯಾರ್ಥಿಗಳು, ಇತರರು ಇದ್ದರು.
ಶಾಲೆಯ ಶಿಕ್ಷಕ ಮಂಜುನಾಥ ಹತ್ತಿ ಸ್ವಾಗತಿಸಿದರು. ಮೋಹನ ತುಪ್ಪದ ಕಾರ್ಯಕ್ರಮ ನಿರೂಪಿಸಿ, ಕೊನೆಗೆ ವಂದಿಸಿದರು.