ಗೋಕಾಕ:ತಮಿಳುನಾಡು ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳ ಆಗ್ರಹ

ತಮಿಳುನಾಡು ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳ ಆಗ್ರಹ
ಗೋಕಾಕ ಮೇ 25 : ತಮಿಳುನಾಡಿನ ತೂತ್ತುಕುಡಿಯಲ್ಲಿ ಇತ್ತಿಚೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೋಲಿಸರು ಲಾಠಿಚಾರ್ಜ ಮಾಡಿ, ಗೋಲಿಬಾರ್ ನಡೆಸಿದ್ದರಿಂದ 13 ಜನರ ಸಾವಿಗೆ ಕಾರಣವಾಗಿರುವ ತಮಿಳುನಾಡು ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ತಹಶೀಲದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.
ಶುಕ್ರವಾರದಂದು ತಹಶೀಲದಾರ ಕಾರ್ಯಾಲಯದಲ್ಲಿ ಸೇರಿದ ಕಾರ್ಯಕರ್ತರು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ನಂತರ ತಹಶೀಲದಾರ ಜಿ.ಎಸ್.ಮಳಗಿ ಅವರಿಗೆ ಮನವಿ ಅರ್ಪಿಸಿದರು.
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ ಮಾತನಾಡಿ, ತೂತ್ತುಕುಡಿಯ ಸ್ಪೆರ್ಲೈಟ್ ಕಾರ್ಖಾನೆಯ ಮಲಿನಯುಕ್ತ ನೀರನ್ನು ನದಿಗೆ ಬಿಡುತ್ತಿರುವುದರಿಂದ ಕುಡಿಯುವ ನೀರು, ಅಂತರ್ಜಲ ಮಲಿನವಾಗಿತ್ತು. ಇದರಿಂದಾಗಿ ಕೃಷಿಭೂಮಿ ಬಂಜರಾಗಿ ಬೆಳೆ ತೆಗೆಯಲು ಅಯೋಗ್ಯವಾಗಿತ್ತು. ಇದರ ವಿರುದ್ಧ ತಮಿಳುನಾಡಿನ ರೈತರು ಕಳೆದ 100 ದಿನಗಳಿಂದ ನ್ಯಾಯಯುತವಾಗಿ ಶಾಂತ ರೀತಿಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾನಿರತ ರೈತರ ಮೇಲೆ ಏಕಾಏಕಿ ಗುಂಡು ಹಾರಿಸುವ ಮೂಲಕ 13 ರೈತರ ಸಾಯಿಸಿ, ಹೋರಾಟವನ್ನು ಹತ್ತಿಕ್ಕುವ ಕಾರ್ಯವನ್ನು ಮಾಡಿದೆ. ಅಲ್ಲಿಯ ಸರ್ಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ರೈತರ ಸಾವಿಗೆ ಕಾರಣವಾಗಿರುವ ಅಲ್ಲಿಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಕುಮಾರ ತಿಗಡಿ, ಮಂಜುನಾಥ ಝಲ್ಲಿ, ಮಾರುತಿ ಜೊತೆನ್ನವರ, ಶಿವಪ್ಪ ವೆಂಕಟಾಪೂರ, ದೇವೆಂದ್ರ ಮಸ್ತಾರ, ರೇವಪ್ಪ ವೆಂಕಟಾಪೂರ, ಬಿ.ಸಿ.ಸುಣಧೋಳಿ ಸೇರಿದಂತೆ ಅನೇಕರು ಇದ್ದರು.