ಘಟಪ್ರಭಾ:ಅರಭಾವಿ ಕ್ಷೇತ್ರವನ್ನು ಇಡೀ ರಾಜ್ಯವೇ ನೋಡಬೇಕು : ಶಾಸಕ ಬಾಲಚಂದ್ರ

ಅರಭಾವಿ ಕ್ಷೇತ್ರವನ್ನು ಇಡೀ ರಾಜ್ಯವೇ ನೋಡಬೇಕು : ಶಾಸಕ ಬಾಲಚಂದ್ರ
ಘಟಪ್ರಭಾ ಮಾ 11 : ಅರಭಾವಿ ಕ್ಷೇತ್ರವನ್ನು ಇಡೀ ರಾಜ್ಯವೇ ನೋಡಬೇಕು. ಅಭಿವೃದ್ಧಿಯಲ್ಲಿ ನವ ಇತಿಹಾಸ ನಿರ್ಮಿಸಬೇಕು. ಕ್ಷೇತ್ರವನ್ನು ರಾಜ್ಯದ ಭೂಪಟದಲ್ಲಿ ಗುರುತಿಸಲು ಮೇ ತಿಂಗಳಲ್ಲಿ ಜರುಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಮೂಲ್ಯ ಮತ ನೀಡಿ ಆಶೀರ್ವದಿಸಿ, ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.
ಶನಿವಾರ ರಾತ್ರಿ ಇಲ್ಲಿಗೆ ಸಮೀಪದ ತುಕ್ಕಾನಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಯಿಂದ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡುತ್ತಿದ್ದ ಅವರು, 5ನೇ ಬಾರಿಗೆ ಮತ್ತೊಮ್ಮೆ ಜನಸೇವೆ ಮಾಡಲು ಬೆಂಬಲ ನೀಡಬೇಕೆಂದು ಕೋರಿದರು.
ಕಳೆದ 25 ವರ್ಷಗಳಿಂದ ಸತತವಾಗಿ ಅರಭಾವಿ ಮತಕ್ಷೇತ್ರದ ಜನರ ಸಂಪರ್ಕದಲ್ಲಿದ್ದು, ಜನರ ನಾಡಿಮಿಡಿತವನ್ನು ಅರಿತಿದ್ದೇನೆ. ಅದರಲ್ಲಿ 14 ವರ್ಷಗಳಿಂದ ಶಾಸಕ-ಸಚಿವನಾಗಿ ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿ ಇಡೀ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ವಿನಿಯೋಗಿಸಿದ್ದೇನೆ. ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ. ಜನರು ಕೂಡ ಎಂದಿಗೂ ಜಾತಿ-ಮತ ನೋಡದೇ ನಿಮ್ಮ ಮನೆಯ ಮಗನಂತೆ ಮಮಕಾರ ತೋರುತ್ತಿರುವುದನ್ನು ನೋಡಿದರೆ ನಾನೇ ಧನ್ಯವಂತ. ಕ್ಷೇತ್ರದಂತಹ ಮತದಾರರನ್ನು ಪಡೆದಿರುವುದು ಪುಣ್ಯವಂತ. ಇಂತಹ ಅವಕಾಶ ಒದಗಿಸಿಕೊಟ್ಟಿರುವ ಜನರ ಋಣ ತೀರಿಸಲು ಮತ್ತೊಮ್ಮೆ ಜನಸೇವೆಗೆ ಅವಕಾಶ ಒದಗಿಸಿಕೊಡುವಂತೆ ಮನವಿ ಮಾಡಿದರು.
ಎಲ್ಲ ಸಮಾಜಗಳ ಅಭಿವೃದ್ಧಿಗೆ ಜಾತ್ಯಾತೀತವಾಗಿ ಶ್ರಮಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಲಾಗುತ್ತಿದೆ. ಆದರೆ ಕೆಲವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅರಿವಿಲ್ಲದೇ ಏನೇನೋ ಮಾತನಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವಂತೆಯೇ ವಿರೋಧಿಗಳ ಒಂದು ಗುಂಪು ಬರುತ್ತಿರುತ್ತದೆ. ಅಂತಹವರಿಗೆ ನೀವೇ ಉತ್ತರ ನೀಡಬೇಕು. ಯಾರು ಕೆಟ್ಟವರು? ಯಾರು ಒಳ್ಳೆಯವರು? ಎಂಬುದನ್ನು ನಿರ್ಧರಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಗೆ ಮತ ನೀಡಬೇಕು ಎಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತುಕ್ಕಾನಟ್ಟಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳನ್ನು ಜ್ಯೋತಿ ಪ್ರಜ್ವಲಿಸುವ ಮೂಲಕ ನೆರವೇರಿಸಿದರು
ಉಪ್ಪಾರ ಅಭಿವೃದ್ಧಿ ನಿಗಮ : ಉಪ್ಪಾರ ಸಮಾಜದ ಅಭಿವೃದ್ಧಿಗೆ ಈಗಿನ ಸರ್ಕಾರ ನಿಗಮ ಸ್ಥಾಪಿಸಿದ್ದು, ಮುಂದಿನ ಬಿಜೆಪಿ ಸರ್ಕಾರದಲ್ಲಿ ಉಪ್ಪಾರ ಸಮಾಜದ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ ಸಮಾಜದ ಉನ್ನತಿ ಮತ್ತು ಪ್ರಗತಿಗಾಗಿ ಶ್ರಮಿಸಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗೆ 10 ಲಕ್ಷ ರೂ : ತುಕ್ಕಾನಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆರಿಗೆ ಕೊಠಡಿ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 10 ಲಕ್ಷ ರೂ.ಗಳನ್ನು ನೀಡಲಾಗುವುದು. ಆಸ್ಪತ್ರೆಯ ಆವರಣದಲ್ಲಿ ತಲೆದೋರಿರುವ ಒತ್ತುವರಿ ಪ್ರಕರಣವನ್ನು ಶೀಘ್ರದಲ್ಲಿ ಶಮನ ಮಾಡಲಾಗುವುದು ಎಂದರು. ಘಟಪ್ರಭಾದಿಂದ ತುಕ್ಕಾನಟ್ಟಿ ಮಾರ್ಗವಾಗಿ ನಾಗನೂರ ರಸ್ತೆ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ತುಕ್ಕಾನಟ್ಟಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಸಾಕಾರಗೊಳಿಸಲಾಗಿದೆ. 14 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ಹೇಳಿದರು.
ಸಾನಿಧ್ಯವನ್ನು ಸ್ಥಳೀಯ ಅತ್ಯಾನಂದ ಮಹಾಸ್ವಾಮಿಗಳು ವಹಿಸಿದ್ದರು.
ಬೆಂಗಳೂರು ಸಹಕಾರಿ ಮಾರಾಟ ಮಹಾಮಂಡಳ ಉಪಾಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಪಾರ್ವತೆವ್ವ ನಾವಿ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಹಮ್ಮನವರ, ತಾಪಂ ಸದಸ್ಯ ಪರಶುರಾಮ ಗದಾಡಿ, ತಾಪಂ ಮಾಜಿ ಅಧ್ಯಕ್ಷೆ ಸುಲೋಚನಾ ಶಿವಪ್ಪ ಮರ್ದಿ, ಪ್ರಕಾಶ ಬಾಗೇವಾಡಿ, ಬಸವಂತ ಕಮತಿ, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಮಲ್ಲು ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಘಯೋನೀಬಮ ಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಯುವ ಧುರೀಣ ರಾವಸಾಹೇಬ ಬೆಳಕೂಡ, ಗುರುನಾಥ ಕಂಕಣವಾಡಿ, ಕ್ಷೇತ್ರದ ಬಿಜೆಪಿ ಮುಖಂಡರು, ಸಹಕಾರಿಗಳು, ಉಪಸ್ಥಿತರಿದ್ದರು.
72 ಲಕ್ಷ ರೂ. ಕಾಮಗಾರಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನರೇಗಾ ಯೋಜನೆಯಡಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ, 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಎನ್ಆರ್ಡಿಡಬ್ಲೂಪಿ ಯೋಜನೆಯಡಿ ನಿರ್ಮಿಸಿದ ಮೇಲ್ಮಟ್ಟದ ಜಲಸಂಗ್ರಹಾಲಯ, 9.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಎರಡು ಶಾಲಾ ಕೊಠಡಿ, 3.25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಅಡುಗೆ ಕೋಣೆಯನ್ನು ಉದ್ಘಾಟಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ತುಕ್ಕಾನಟ್ಟಿಯ ವಿವಿಧ ಸಂಘ-ಸಂಸ್ಥೆಗಳು, ಗ್ರಾಮಸ್ಥರು ಅದ್ಧೂರಿಯಾಗಿ ಸತ್ಕರಿಸಿದರು. ಮೆರವಣಿಗೆ ಮೂಲಕ ವೇದಿಕೆಗೆ ಶಾಸಕರನ್ನು ವಿವಿಧ ವಾದ್ಯಗಳೊಂದಿಗೆ ಸ್ವಾಗತಿಸಿಕೊಂಡರು.