ಗೋಕಾಕ:ರೈತರ ಜೀವನಾಡಿ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ..!
ರೈತರ ಜೀವನಾಡಿ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ..!
ಅಡಿವೇಶ ಮುಧೋಳ ಬೆಟಗೇರಿ
ಕರ್ನಾಟಕದ ಗ್ರಾಮೀಣ ವಲಯದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಸಹಕಾರಿ ಸಂಘ-ಸಂಸ್ಥೆಗಳು ವಿವಿಧ ಕ್ಷೇತ್ರದಲ್ಲಿ ಹಳ್ಳಿಯ ಜನರ ಬದುಕಿನ ಜೀವಾಳವಾಗಿವೆ. ಅದರಲ್ಲೂ ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ ಸತತ 2ನೇ ಭಾರಿ ಬೆಳಗಾವಿ ಜಿಲ್ಲಾ ಮಟ್ಟದ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿಕೊಂಡಿದೆ.
ಆನಂದಕಂದ ಕಾವ್ಯನಾಮದಿಂದ ನಾಡಿನಾದ್ಯಂತ ಚಿರಪರಿಚಿತರಾದ ಡಾ.ಬೆಟಗೇರಿ ಕೃಷ್ಣಶರ್ಮರ ಹುಟ್ಟೂರಾದ ಈ ಬೆಟಗೇರಿ ಗ್ರಾಮದಲ್ಲಿ ಕೃಷಿ ಕೂಲಿ ಕಾರ್ಮಿಕನ ಮನೆ ಸೇರಿದಂತೆ ಪ್ರತಿ ಮನೆಯಲ್ಲಿ ಎರಡ್ಮೂರು ನಿತ್ಯ ಹಾಲು ಕೂಡುವ ಜಾನುವಾರುಗಳಿವೆ. ಹೈನುಗಾರಿಕೆಯಿಂದ ಇಲ್ಲಿಯ ಸಾಕಷ್ಟು ಕುಟುಂಬಗಳು ಆರ್ಥಿಕ ಸಬಲತೆ ಕಂಡುಕೊಂಡಿವೆ. ಹೈನುಗಾರಿಕೆಯೇ ಇಲ್ಲಿಯ ರೈತರ ಬದುಕಿಗೆ ಆಸರೆಯಾಗಿದೆ. ಹೀಗಾಗಿ ಇಲ್ಲಿ ಹೈನುಗಾರಿಕೆ ಅಭಿವೃದ್ಧಿಯ ಪಥದತ್ತ ಹೆಜ್ಜೆಯನ್ನಿಟ್ಟು ಇಲ್ಲಿಯ ಹಾಲು ಉತ್ಪಾದಕರ ಸಹಕಾರಿ ಸಂಘ ರೈತರ ಜೀವನಾಡಿಯಾಗಿದೆ.
ಸಂಘ ಪಡೆದ ಪ್ರಶಸ್ತಿಗಳು : ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ(ಕೆಎಮ್ಎಫ್)ದವರು ಪ್ರತಿ ವರ್ಷ ಕೂಡಮಾಡುವ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಾಧನೆಗೈದ ಜಿಲ್ಲಾ ಮಟ್ಟದ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿಯನ್ನು ಸತತ ಎರಡನೇಯ ಭಾರಿಗೆ ಇಲ್ಲಿಯ ಹಾಲು ಉತ್ಪಾದಕರ ಸಹಕಾರಿ ಸಂಘ ತನ್ನ ಮುಡಿಗೆರಿಸಿಕೊಂಡಿದೆ. ಈಗಾಗಲೇ ಹಲವಾರು (ನಾಲ್ಕು) ಸಲ ಸಂಘ ಗೋಕಾಕ ತಾಲೂಕಾ ಮಟ್ಟದ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿದೆ. ಅಲ್ಲದೇ ಪಶು ಆಹಾರ ಮಾರಾಟ, ಕೃತಕ ಗರ್ಭಧಾರಣೆ ಸೇರಿದಂತೆ ಹಲವಾರು ಜಿಲ್ಲಾ, ತಾಲೂಕು, ವಲಯ ಮಟ್ಟದ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಸನ್2011 ರಲ್ಲಿ ಸಂಘ ಬೆಳ್ಳಿಹಬ್ಬ ವಿಜೃಂಭನೆಯಿಂದ ಆಚರಿಸಿಕೊಂಡಿದೆ. ಸ್ವಂತ ಭವ್ಯ ಕಟ್ಟಡ ಹೊಂದಿ, ಹಲವು ವರ್ಷಗಳಿಂದ ಉತ್ತಮ ಸ್ಥಾನಮಾನದೊಂದಿಗೆ ತಾಲೂಕಾ ಒಕ್ಕೂಟ, ಜಿಲ್ಲಾ ಒಕ್ಕೂಟಕ್ಕೆ ಎರಡು ದಶಕಗಳ ಕಾಲ ಸತತ ಒಂದೇ ಗುಣಮಟ್ಟದ ಹಾಲು ಸಂಗ್ರಹಿಸಿ ನೀಡುತ್ತಿರುವ ಈ ಸಂಘದ ಹಿರಿಮೆಯಾಗಿದೆ. ಅಲ್ಲದೇ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಕಾರ್ಯನಿರ್ವಾಹಕ, ಸಿಬ್ಬಂದಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವದು ಸಂಘದ ಪ್ರಗತಿಗೆ ಹಿಡಿದ ಕೈಗನ್ನಡಿ.
ಶನಿವಾರ ಸೆ.22 ರಂದು ನಡೆದ ಬೆಳಗಾವಿ ಜಿಲ್ಲಾ (ಕೆಎಮ್ಎಫ್) ಹಾಲು ಒಕ್ಕೂಟದ ಸರ್ವ ಸಾಧಾರಣ ಮಹಾಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಮ್ಎಫ್ ಅಧ್ಯಕ್ಷ ವಿವೇಕರಾವ್ ಪಾಟೀಲ ಇಲ್ಲಿಯ ಸಂಘದ ಅಧ್ಯಕ್ಷ ಪ್ರಾಣೇಶ ಪಾಟೀಲ, ಮುಖ್ಯ ಕಾರ್ಯನಿವಾಹಕ ನಿಂಗಪ್ಪ ನೀಲಣ್ಣವರ ಅವರಿಗೆ ಸತತ 2ನೇ ಸಲ ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ.
ಸಂಘದ ಪ್ರಗತಿ ನೋಟ: ಸನ್ 1985 ರಲ್ಲಿ ಗ್ರಾಮದ ಅಂದಿನ ಕೆಲವು ಜನ ಪ್ರಗತಿ ಪರ ಹಿರಿಯ ರೈತರ ಪರಿಶ್ರಮದ ಪ್ರತಿಫಲವಾಗಿ 90 ಜನ ಸದಸ್ಯರು, 900ರೂ ಶೇರ್ ಹಣದಿಂದ, ಮುಂಜಾನೆ ಹಾಗೂ ಸಂಜೆ ಸೇರಿ ದಿನವೊಂದಕ್ಕೆ ಕೇವಲ 65 ಲೀ. ಹಾಲು ಸಂಗ್ರಹಣೆಯಿಂದ ಪ್ರಾರಂಭವಾದ ಸಂಘ, ಇಂದು ಸನ್ 2018ರಲ್ಲಿ 800 ಜನ ಶೇರ್ ಸದಸ್ಯರನ್ನು ಹೊಂದಿ, ನಿತ್ಯ ಮುಂಜಾನೆ ಮತ್ತು ಸಂಜೆ ಸೇರಿ ಕನಿಷ್ಠ 2900ಲೀ.ನಿಂದ 3000 ಲೀ.ವರೆಗೆ ಹಾಲು ಸಂಗ್ರಹಣೆ ಮಾಡುತ್ತಿದ್ದು, ಪ್ರತಿ ವರ್ಷ ಶೇರ ಸದಸ್ಯರಿಗೆ ಶೇ20ರಷ್ಟು ಬೊನಸ್, ಹಾಲು ನೀಡುವ ಸದಸ್ಯರಿಗೆ ಶೇ. 65ರಷ್ಟು (ಪ್ರಸಕ್ತ ಸಾಲಿನಲ್ಲಿ 725744 ರೂ) ಲಾಭಾಂಶ ನೀಡುತ್ತದೆಲ್ಲದೇ, 2017-18ನೇ ಸಾಲಿನಲ್ಲಿ 15,71427ರೂ ನಿವ್ವಳ ಲಾಭ ಗಳಿಸಿ ಅಭಿವೃದ್ಧಿಯ ಪಥದತ್ತ ಹೆಜ್ಜೆಯನ್ನಿರಿಸಿದೆ. 2008 ರಿಂದ ಸತತ ಅಡಿಟ್ ವರ್ಗೀಕರಣದಲ್ಲಿ ಎ ಶ್ರೇಣಿ ಸ್ಥಾನ ಪಡೆದುಕೊಂಡಿದೆ. ಸಂಘ ತನ್ನ ಒಕ್ಕೂಟಕ್ಕೂ ಸಹ ಹಲವು ವರ್ಷಗಳಿಂದ ಒಂದೇ ಗುಣಮಟ್ಟದ ಹಾಲು ಸಂಗ್ರಹಿಸಿ ನೀಡಿ ಹಲವು ವರ್ಷಗಳಿಂದ ಉತ್ತಮ ಸ್ಥಾನಮಾನ ಗಳಿಸಿಕೊಂಡಿದೆ.
ಪ್ರತಿ ವರ್ಷ ರೈತರಿಗೆ ಬಹುಮಾನ : ಸ್ಥಳೀಯ ಈ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ರೈತರಿಗೆ ಪ್ರೋತ್ಸಾಹ, ಬಹುಮಾನವಾಗಿ ಗೃಹೊಪಯೋಗಿ ಉಪಕರಣ, ಸಲಕರಣೆ ನೀಡಲಾಗುತ್ತದೆ. ಗ್ರಾಮದ ಹೈನುಗಾರಿಕೆ ಜಾನುವಾರಗಳಿಗೆ ಪಶುವಿಮಾ, ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಸಂಘದ ಸಹಯೋಗದಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಹೀಗಾಗಿ ಸಂಘದ ಜೊತೆ ಸ್ಥಳೀಯ ರೈತರು ಅವಿನಾಭಾವ ಸಂಬಂಧವಿರಿಸಿಕೊಂಡದ್ದು ಅವಿಸ್ಮರಣೀಯವಾಗಿದೆ.
“ ಸ್ಥಳೀಯ ಹೈನುಗಾರಿಕೆ ರೈತರ ಸಹಕಾರ, ಪ್ರೋತ್ಸಾಹದಿಂದ ಹಾಗೂ ಉತ್ತಮ ಗುಣಮಟ್ಟದ ಹಾಲು ಈ ಸಂಘಕ್ಕೆ ನೀಡುತ್ತಿರುವದರ ಪ್ರತಿಫಲದಿಂದ ಬೆಳಗಾವಿ ಜಿಲ್ಲಾ ಮಟ್ಟದ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿ ಸತತ 2ನೇ ಭಾರಿ ಬಂದಿದೆ. ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಹೈನುಗಾರಿಕೆ ಅಭಿವೃದ್ಧಿಗಾಗಿ ಸಂಘದಿಂದ ಪ್ರಯತ್ನಿಸಲಾಗುವದು
* ಪ್ರಾಣೇಶ ಪಾಟೀಲ. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ
“ಮುಂದಿನ ದಿನಗಳಲ್ಲಿ ಇಲ್ಲಿಯ ಹಾಲು ಉತ್ಪಾದಕರ ಸಹಕಾರಿ ಸಂಘ ರಾಜ್ಯ ಮಟ್ಟದಲ್ಲಿ ಮಾದರಿ ಸಂಘವಾಗಿ, ತನ್ನದೇ ವೈಶಿಷ್ಟ್ಯತೆಯೊಂದಿಗೆ ಪ್ರಗತಿ ಕಂಪು ನಾಡಿನಲ್ಲೆಡೆ ಹರಡಲಿ ಅಂಬುವದು ಸ್ಥಳೀಯ ರೈತರ ಮತ್ತು ನಾಗರಿಕರ ಆಶಯವಾಗಿದೆ
. * ವಿಜಯ ಮಠದ .