ಘಟಪ್ರಭಾ:ಎರಡು ತಿಂಗಳೊಳಗೆ ಅರಭಾವಿ-ದುರದುಂಡಿ-ದಂಡಾಪೂರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ.: ಶಾಸಕ ಬಾಲಚಂದ್ರ ಸೂಚನೆ
ಎರಡು ತಿಂಗಳೊಳಗೆ ಅರಭಾವಿ-ದುರದುಂಡಿ-ದಂಡಾಪೂರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ.: ಶಾಸಕ ಬಾಲಚಂದ್ರ ಸೂಚನೆ
ಘಟಪ್ರಭಾ ಡಿ 23: ಗುಣಮಟ್ಟದ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಎರಡು ತಿಂಗಳೊಳಗೆ ಅರಭಾವಿ-ದುರದುಂಡಿ-ದಂಡಾಪೂರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿಗೆ ಸಮೀಪದ ದುರದುಂಡಿ ಗ್ರಾಮದಲ್ಲಿ ಶನಿವಾರದಂದು ಲೋಕೋಪಯೋಗಿ ಇಲಾಖೆಯಿಂದ 1.17 ಕೋಟಿ ರೂ. ವೆಚ್ಚದ ಅರಭಾವಿ-ದುರದುಂಡಿ-ದಂಡಾಪೂರ ರಸ್ತೆ ಕಿ.ಮೀ 3.50 ರಿಂದ 8.00 ರವರೆಗೆ ಸುಧಾರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದುರದುಂಡಿ ಗ್ರಾಮದಲ್ಲಿ ಅರಭಾವಿ-ದುರದುಂಡಿ-ದಂಡಾಪೂರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿರುವುದು.
ಅರಭಾವಿ ಮತಕ್ಷೇತ್ರದಲ್ಲಿ ಎರಡು ತಿಂಗಳೊಳಗೆ ಬಾಕಿ ಉಳಿದಿರುವ ರಸ್ತೆಗಳು ಅದರಲ್ಲೂ ರೈತರ ತೋಟದ ರಸ್ತೆಗಳನ್ನು ಪೂರ್ಣಗೊಳಿಸಲಾಗುವುದು. ದುರದುಂಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ 65 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ 16.25 ಲಕ್ಷ ರೂ. ವೆಚ್ಚದ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಉದ್ಘಾಟನೆ ನೆರವೇರಲಿದೆ. ರುದ್ರಭೂಮಿಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ದುರದುಂಡಿ ಗ್ರಾಮದಲ್ಲಿ ಎಲ್ಲ ಹಿರಿಯರು ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಚಿಕ್ಕಪುಟ್ಟ ಮನಸ್ತಾಪಗಳನ್ನು ಮರೆತು ಒಂದಾಗಿರುವುದಕ್ಕೆ ಮುಖಂಡರನ್ನು ಅಭಿನಂದಿಸಿದರು. ಚುನಾವಣೆಗೆ ಇನ್ನೇನು 3 ತಿಂಗಳು ಬಾಕಿ ಇರುವಾಗ ಈಗಿನಿಂದಲೇ ಚುನಾವಣೆಯನ್ನು ಎದುರಿಸಲಿಕ್ಕೆ ಸಿದ್ಧರಾಗಬೇಕು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು. ಹಿಡಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ಜನೇವರಿ 10 ರಿಂದ ನೀರು ಹರಿಸಲಾಗುವುದು. ರೈತರ ಹಿತದೃಷ್ಟಿಯಿಂದ ನೀರನ್ನು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿಕೊಂಡಿರುವುದಾಗಿ ಅವರು ಹೇಳಿದರು.
ಗ್ರಾಪಂ ಅಧ್ಯಕ್ಷ ಭೀಮಶಿ ಹುಕ್ಕೇರಿ, ಹಿಡಕಲ್ ಡ್ಯಾಂ ಘ.ಯೋ.ನೀ.ಬ.ಸ.ಸಂಘದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪ್ರಭಾಶುಗರ ನಿರ್ದೇಶಕರಾದ ರಾಮಣ್ಣಾ ಬಂಡಿ, ಶಿವಲಿಂಗ ಪೂಜೇರಿ, ಮುಖಂಡರಾದ ಶಿವಮೂರ್ತಿ ಹುಕ್ಕೇರಿ, ಹೊನ್ನಜ್ಜ ಕೋಳಿ, ಡಾ.ಶಂಕರ ಗೋರಖನಾಥ, ಮಹಾದೇವ ತಾಂಬಡಿ, ಭೀಮಶಿ ಅಂತರಗಟ್ಟಿ, ನಿಂಗಪ್ಪ ಮಾಳ್ಯಾಗೋಳ, ರಾಯಪ್ಪ ನಿಂಗನ್ನವರ, ದೇವೇಂದ್ರ ಅರಭಾವಿ, ವಿರುಪಾಕ್ಷಿ ಪತ್ತಾರ, ಸಿದ್ದಪ್ಪ ಅಂತರಗಟ್ಟಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶ್ರೀಪತಿ ಗಣೇಶವಾಡಿ, ದೇಶಪಾಂಡೆ, ರೇವಯ್ಯಾ ಮಠದ, ಬಸು ಮಾಳೇದವರ, ಪಿಡಬ್ಲೂಡಿ ಎಇಇ ಅಡಿವೇಶ ಹೊನ್ನಾವರ, ಗುತ್ತಿಗೆದಾರ ಬಿ.ಬಿ. ದಾಸನವರ, ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.
ಬಿಎಸ್ವೈ ಮೂಲಕ ಮನವಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ರೈತನೋರ್ವ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಿಲ್ಲವೆಂದು ಶಾಸಕರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಾಲಚಂದ್ರ ಜಾರಕಿಹೊಳಿ ಅವರು, ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಿವೆ. ಮುಂದಿನ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ರೈತರ ಹಿತ ಕಾಪಾಡುವ ಕೆಲಸ ನಿರ್ವಹಿಸುತ್ತೇನೆಂದು ಹೇಳಿದರು.