ಘಟಪ್ರಭಾ:ಜೆ.ಜಿ ಆಸ್ಪತ್ರೆಯಲ್ಲಿ ಕೋವಿಡ ಹೆಲ್ತ ಕೇರ್ ಸೆಂಟರ್ ಪ್ರಾರಂಭ : ಡಾ.ಬಿ.ಕೆ.ಎಚ್.ಪಾಟೀಲ
ಜೆ.ಜಿ ಆಸ್ಪತ್ರೆಯಲ್ಲಿ ಕೋವಿಡ ಹೆಲ್ತ ಕೇರ್ ಸೆಂಟರ್ ಪ್ರಾರಂಭ : ಡಾ.ಬಿ.ಕೆ.ಎಚ್.ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಸೆ 23 :
ಕೋವಿಡ-19 ರೋಗದಿಂದ ಆಗುತ್ತಿರುವ ತೊಂದರೆ, ಸಾವು ನೋವುಗಳನ್ನು ಕಂಡು ಸುತ್ತ ಮುತ್ತಲಿನ ಜನರ ಅನುಕೂಲಕ್ಕಾಗಿ ಜೆ.ಜಿ ಆಸ್ಪತ್ರೆಯಲ್ಲಿ ಕೋವಿಡ ಹೆಲ್ತ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದು ಜೆ.ಜಿ. ಸಹಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಕೆ.ಎಚ್.ಪಾಟೀಲ ಹೇಳಿದರು.
ಅವರು ಬುಧವಾರದಂದು ಸ್ಥಳೀಯ ಜೆ.ಜಿ.ಸಹಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ 50 ಹಾಸಿಗೆಯುಳ್ಳ ಕೋವಿಡ ಹೆಲ್ತ ಕೇರ್ ಸೆಂಟರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಕೋವಿಡ ರೋಗಿಗಳು ಹೊರಗೆ ಒಂದು ದಿನದ ಚಿಕಿತ್ಸೆಗೆ 25 ರಿಂದ 30 ಸಾವಿರ ರೂಪಾಯಿ ಹಣ ಸಂದಾಯ ಮಾಡುವುದನ್ನು ಕಂಡು ಅತೀ ಕಡಿಮೆ ದರದಲ್ಲಿ ಒಂದು ದಿನಕ್ಕೆ ಜನರಲ್ ವಾರ್ಡಿನಲ್ಲಿ 8000 ರೂಪಾಯಿಯಲ್ಲಿ ಉಪಹಾರ ಮತ್ತು ಎರಡು ಹೊತ್ತಿನ ಊಟ ಸೇರಿ ಕೋವಿಡ ಚಿಕಿತ್ಸೆ ನೀಡಿ ಬಡ ಜನರಿಗೆ ಅನುಕೂಲ ಮಾಡುವ ದೃಷ್ಠಿಯಿಂದ ಈ ಆಸ್ಪತ್ರೆ ಪ್ರಾರಂಭಿಸಲಾಗಿದೆ ಎಂದರು.
ಆಯ್.ಸಿ.ಯು. ವಾರ್ಡಿಗೆ 10,000 ರೂಪಾಯಿ ಸ್ಪೇಶಲ್ ವಾರ್ಡಿಗೆ 15,000 ಹಾಗೂ ಸ್ಪೇಶಲ್ ರೂಮಗೆ 20,000 ಸಾವಿರ ಚಾರ್ಜ ಮಾಡಲಾಗುವದು. ಈ ಅಸ್ಪತ್ರೆಯಲ್ಲಿ ಡಾಕ್ಟರ ಮತ್ತು ನರ್ಸ ಸೇರಿ 20 ಜನ ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಾರೆ. ಒಳ್ಳೆಯ ಸುಸಜ್ಜಿತ ಯಂತ್ರೋಪಕರಣಗಳಿದ್ದು, 30 ಆಕ್ಸಿಜನ್ ಸಿಲೆಂಡರಗಳನ್ನು ಹೊಂದಿದೆ ಎಂದರು.
ಕೋವಿಡ ಹೆಲ್ತ ಕೇರ ಸೆಂಟರದ ಉದ್ಘಾಟನೆಯನ್ನು ಸ್ಥಳೀಯ ಗುಬ್ಬಲಗುಡ್ಡ ಮಠದ ಪೀಠಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನೇರವೇರಿಸಿದರು. ಜೆ.ಜಿ.ಸಹಕಾರಿ ಆಸ್ಪತ್ರೆಯ ಚೇರಮನರಾದ ಬಿ.ಆರ್.ಪಾಟೀಲ ನಾಗನೂರ, ನಿರ್ದೇಶಕರುಗಳಾದ ಅಪ್ಪಯ್ಯಾ ಬಡಕುಂದ್ರಿ, ಚಂದ್ರಶೇಖರ ಕಾಡದವರ, ಸುರೇಶ ಕಾಡದವರ, ಎಸ್.ಎಮ್.ಚಂದರಗಿ, ಬಿ.ಎಮ್,ಬಂಡಿ, ಆರ್.ಜಿ.ಪತ್ತಾರ, ಆಶಾದೇವಿ ಕತ್ತಿ, ಡಾ. ಶರ್ಮಾ, ಡಾ. ಗೋಪಾಲರಾವ, ಡಾ.ವಿಲಾಸ ಮಾನೆ, ಎಲ್.ಎಸ್.ಹಿಡಕಲ್ ಮ್ಯಾನೆಜರ ಎಮ್.ಬಿ. ಹಗರಿ ಇದ್ದರು.