ಘಟಪ್ರಭಾ:ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಒತ್ತಾಯಿಸಿ ಭೋವಿ ವಡ್ಡರ ಸಂಘದ ಮನವಿ
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಒತ್ತಾಯಿಸಿ ಭೋವಿ ವಡ್ಡರ ಸಂಘದ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಸೆ 20 :
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಒತ್ತಾಯಿಸಿ ಭೋವಿ ವಡ್ಡರ ಸಂಘದ ಬೆಳಗಾವಿ ಜಿಲ್ಲಾ ಹಾಗೂ ಗೋಕಾಕ ತಾಲುಕಾ ಘಟಕದ ವತಿಯಿಂದ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರಿಗೆ ರವಿವಾರ ಮನವಿ ಸಲ್ಲಿಸಲಾಯಿತು.
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಐಕ್ಯತೆ ಉಳಸಿಕೊಳ್ಳುವುದು ಸಂಘದ ಉದ್ದೇಶವಾಗಿದೆ. ನ್ಯಾ.ಸದಾಶಿವ ಆಯೋಗದ ವರದಿಯ ಬಹಿರಂಗ ಚರ್ಚೆಯಿಲ್ಲದೆ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು. ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು.
ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಮತ್ತು ಆಸಕ್ತರಿಗೆ, ಸಂಘ ಸಂಸ್ಥೆಗಳಿಗೆ ಈ ವರದಿಯ ಧೃಡೀಕೃತ ಪ್ರತಿಯನ್ನು ನೀಡಬೇಕು. ಆಕ್ಷೇಪಣೆ, ತಕರಾರು ಮತ್ತು ನ್ಯಾಯಸಮ್ಮತ ತಿದ್ದುಪಡಿಗಳನ್ನು ಸೂಚಿಸಲು ಕಾಲಾವಕಾಶ ನೀಡಬೇಕು. ಮೀಸಲಾತಿ ಹೆಚ್ಚಳಕ್ಕಾಗಿ ಶಿಫಾರಸ್ಸು ಮಾಡಿರುವ ನ್ಯಾ.ನಾಗಮೋಹನದಾಸ ಅವರ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಬೇಕು. ಹಿಂದಿನ ಸರ್ಕಾರ ತಯಾರಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಮದಾಪೂರ, ತಾಲೂಕಾಧ್ಯಕ್ಷ ಎಲ್.ಜಿ.ಗಾಡಿವಡ್ಡರ, ಸಮಾಜದ ಮುಖಂಡರಾದ ಪರಶುರಾಮ ಕಲಕುಟಗಿ, ಹಣಮಂತ ಗಾಡಿವಡ್ಡರ, ಅರ್ಜುನ ಗಾಡಿವಡ್ಡರ, ಶೆಟ್ಟೆಪ್ಪಾ ಗಾಡಿವಡ್ಡರ, ಯಲ್ಲಪ್ಪಾ ಗಾಡಿವಡ್ಡರ, ರಾಜು ಗಾಡಿವಡ್ಡರ, ಆನಂದ ಗಾಡಿವಡ್ಡರ, ಚಂದ್ರಕಾಂತ ಗಾಡಿವಡ್ಡರ, ಕಲ್ಲೋಳೆಪ್ಪ ಗಾಡಿವಡ್ಡರ, ಕರಶುರಾಮ ಗಾಡಿವಡ್ಡರ, ಮಲ್ಲೇಶ ಗಾಡಿವಡ್ಡರ, ಶಿವಾಜಿ ಗಾಡಿವಡ್ಡರ, ಮಾರುತಿ ಗಾಡಿವಡ್ಡರ, ಭೀಮಶಿ ಗಾಡಿವಡ್ಡರ, ಎಂ.ಬಿ. ಗಾಡಿವಡ್ಡರ, ಎಂ.ಎಲ್. ಗಾಡಿವಡ್ಡರ ಸೇರಿದಂತೆ ಅನೇಕರು ಇದ್ದರು.