ಗೋಕಾಕ:ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು : ಗೌಡಪ್ಪ ಮಾಳೇದ
ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು : ಗೌಡಪ್ಪ ಮಾಳೇದ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜ 6 :
ಗ್ರಾಮದಲ್ಲಿರುವ 18 ವರ್ಷ ವಯಸ್ಸು ತುಂಬಿದ ಯುವಕ-ಯುವತಿಯರು ತಪ್ಪದೇ ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂದು ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗೌಡಪ್ಪ ಮಾಳೇದ ಹೇಳಿದರು.
ಗ್ರಾಮದ ಗ್ರಾಮ ಪಂಚಾಯತಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯ ಸಹಯೋಗದಲ್ಲಿ ಸೋಮವಾರ ಜ.6 ರಂದು ಸ್ಥಳೀಯ ಪ್ರಮುಖ ಸ್ಥಳ ಮತ್ತು ಬೀದಿಗಳಲ್ಲಿ ಮತದಾರರ ಮಿಂಚಿನ ನೊಂದಣಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಜ.6, 7, 8 ರಂದು ಮತದಾರ ಯಾದಿಯಲ್ಲಿ ತಮ್ಮ ಹೆಸರು ವರ್ಗಾವಣೆ ಮತ್ತು ಲೋಪದೋಷಗಳಿದ್ದರೆ, ಸೂಕ್ತ ದಾಖಲೆಗಳನ್ನು ಸ್ಥಳೀಯ ಬಿಎಲ್ಒಗೆ ಕೊಟ್ಟು ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಹಾಗೂ ಎಲ್ಲ ಯುವಕ-ಯುವತಿಯರು ಮತದಾರರ ಯಾದಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಅವಕಾಶವಿದೆ ಎಂದು ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ ತಿಳಿಸಿದರು.
ಊರಿನ ಪ್ರಮುಖ ಬೀದಿಗಳಲ್ಲಿ ಮತದಾರರ ಮಿಂಚಿನ ನೊಂದಣಿ ಕುರಿತು ಹಲವಾರು ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲ್ಲಿಯ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.
ಗ್ರಾಮ ಲೆಕ್ಕಾಧಿಕಾರಿ ಜೆ.ಎಂ.ನದಾಫ್, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ವಿಠಲ ಚಂದರಗಿ, ಶಿವಾನಂದ ಐದುಡ್ಡಿ, ಈಶ್ವರ ಮುಧೋಳ, ಪ್ರಕಾಶ ಹಾಲಣ್ಣವರ, ಮಹೇಶಕುಮಾರ ಹೊರಟ್ಟಿ, ವಿಠಲ ದಂಡಿನ, ದುಂಡಪ್ಪ ಹಾಲಣ್ಣವರ ಸೇರಿದಂತೆ ಗ್ರಾಮಸ್ಥರು, ಇತರರು ಇದ್ದರು.