ಗೋಕಾಕ:ಪ್ಲಾಸ್ಟರ್ ಆರ್ಫ ಪ್ಯಾರಿಸ ನಿರ್ಮಿತ ಗಣಪತಿಗಳನ್ನು ತಯಾರಿಸಿದಲ್ಲಿ ಶಿಕ್ಷೆ : ಶಿವಾನಂದ ಹಿರೇಮಠ

ಪ್ಲಾಸ್ಟರ್ ಆರ್ಫ ಪ್ಯಾರಿಸ ನಿರ್ಮಿತ ಗಣಪತಿಗಳನ್ನು ತಯಾರಿಸಿದಲ್ಲಿ ಶಿಕ್ಷೆ : ಶಿವಾನಂದ ಹಿರೇಮಠ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 12 :
ಪರಿಸರ ಮಾಲಿನ್ಯ ಬಗ್ಗೆ ಅರಿವು ಮೂಡಿಸಲು ರಸಾಯನಿಕ ಮಿಶ್ರಿತ ಬಣ್ಣದ ಗಣಪತಿಗಳನ್ನು ಮತ್ತು ಪ್ಲಾಸ್ಟರ್ ಆರ್ಫ ಪ್ಯಾರಿಸ ನಿರ್ಮಿತ ಗಣಪತಿಗಳನ್ನು ತಯಾರಿಸಿದಲ್ಲಿ ಪರಿಸರ ಸಂರಕ್ಷಣೆ ಕಾಯ್ದೆ-1976 ರ ಅನ್ವಯ ಶಿಕ್ಷೆ ವಿಧಿಸಲಾಗುವದು ಎಂದು ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಹೇಳಿದರು.
ಅವರು ಗುರುವಾರದಂದು ತಾಲೂಕಿನ ಕೊಣ್ಣೂರ ಪುರಸಭೆಯ ಸಭಾಭವನದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯಿನಿಕ ಬಣ್ಣದಿಂದ ಸಿದ್ದಪಡಿಸಿದ ಗಣೇಶ ಹಾಗೂ ಇನ್ನಿತರ ವಿಗ್ರಹಗಳನ್ನು ತಯಾರಿಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದ ಮೇರೆಗೆ ಮೂರ್ತಿಕಾರರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸರ್ಕಾರದ ಆದೇಶ ಪಾಲನೆ ಮಾಡಬೇಕು. ಇದಕ್ಕೆ ಮೂರ್ತಿ ತಯಾರಕರು ಮತ್ತು ಮೂರ್ತಿಗಳ ಬಳಕೆದಾರರು ಸಹಕರಿಸಬೇಕು. ತಪ್ಪಿದಲ್ಲಿ ಪುರಸಭೆಯಿಂದ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಗೋಕಾಕ ನಗರಸಭೆಯ ಪರಿಸರ ಅಭಿಯಂತರ ಮಂಜುನಾಥ ಗಜಾಕೋಶ ಅವರು ಉಪನ್ಯಾಸ ನೀಡುತ್ತ ಪಿ.ಓ.ಪಿ. ಮತ್ತು ಹಾನಿಕಾರಕ ರಸಾಯನಗಳಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಕುಡಿಯುವ ಜಲಮೂಲಗಳಲ್ಲಿ ವಿಸರ್ಜನೆ ಮಾಡಿದಲ್ಲಿ ಹಾನಿಕಾರಕ ರಾಸಾಯನಿಕಗಳು ಮಿಶ್ರಣಗೊಂಡು ನೀರು ಮಾಲಿನ್ಯಗೊಳ್ಳುತ್ತದೆ. ಅಂತಹ ನೀರನ್ನು ಸಾರ್ವಜನಿಕರು ಸೇವಿಸುವುದರಿಂದ ತ್ವಚೆ ಮತ್ತು ಕ್ಯಾನ್ಸರ್ದಂಥ ರೋಗಗಳಿಗೆ ತುತ್ತಾಗುವ ಸಂದರ್ಭ ಒದಗಿ ಬರುತ್ತದೆ. ಮತ್ತು ಪುರಾಣ ಪ್ರಸಿದ್ದ ಐತಿಹಾಸಿಕ ಹಿನ್ನಲೆಯುಳ್ಳ ಗಣಪತಿ ಉತ್ಸವವನ್ನು ಮಣ್ಣಿನ ಮತ್ತು ಬಣ್ಣ ರಹಿತ ವಿಗ್ರಹಗಳನ್ನು ಪ್ರತಿಷ್ಠಾಪಿಸುದರೊಂದಿಗೆ ಮುಂದಿನ ಪೀಳಿಗೆಗೆ ಒಳ್ಳೆಯ ನೀರು ಮತ್ತು ಪರಿಸರವನ್ನು ನೀಡಬೇಕೆಂದು ಹೇಳಿದರು.
ಪುರಸಭೆಯ ವ್ಯಾಪ್ತಿಯ ಗಣಪತಿ ಮೂರ್ತಿ ತಯಾರಕರು ನಾವು ಯಾರೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಸಾಯನಿಕ ಮಿಶ್ರಿತ ಬಣ್ಣಗಳ ಗಣಪತಿಯನ್ನು ತಯಾರಿಸುತ್ತಿಲ್ಲ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಮತ್ತು ಪರಿಸರ ಸ್ನೇಹಿ ಬಣ್ಣದ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಜಿಲ್ಲೆಯ ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಪಿ.ಓ.ಪಿ. ಮೂರ್ತಿಗಳು ಪೂರೈಕೆಯಾಗುತ್ತಿದ್ದು ನಮಗೆ ಬೇಡಿಕೆ ಕುಸಿದು ಆರ್ಥಿಕ ನಷ್ಟವಾಗುತ್ತಿದೆ ಎಂದರು.
ನಮ್ಮ ಉದ್ಯೋಗ ಗುಡಿ ಕೈಗಾರಿಕೆಯಾಗಿದ್ದು ರಾಜ್ಯದಲ್ಲಿಯೇ ಮಾದರಿ ಮೂರ್ತಿಗಳ ತಯಾರಿಕೆ ನಮ್ಮ ಕೊಣ್ಣೂರಿನಲ್ಲಿ ಆಗುತ್ತಿವೆ. ಮೂರ್ತಿ ತಯಾರಿಕೆ ಸಂಘಗಳು ಇದ್ದು ಸಹಾಯಧನದ ಅವಶ್ಯಕತೆಯಿದೆ. ನಮಗೆ ಸರಕಾರದ ಸಹಾಯ ಆಗಬೇಕು ಎಂದು ಮನವಿ ಮಾಡಿದರು.
ಮೂರ್ತಿಕಾರರ ಬೇಡಿಕೆ ಕುರಿತು ಅರ್ಜಿ ಸಲ್ಲಿಸಿದಲ್ಲಿ ಮೇಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದು ಮುಖ್ಯಾಧಿಕಾರಿಗಳು ಮೌಖಿಕ ಭರವಸೆ ನೀಡಿದರು.
ಸಭೆಯಲ್ಲಿ ಪುರಸಭೆ ಸದಸ್ಯರಾದ ವಿನೋದ ಕರನಿಂಗ, ಮಾರುತಿ ಪೂಜೇರಿ, ಆರ್.ಎಸ್.ಕಡಲಗಿ, ಇಮ್ರಾನ ಜಮಾದಾರ, ರಾಮಲಿಂಗ ಮಗದುಮ್, ಬಿ.ಬಿ. ಹುಕ್ಕೇರಿ, ಸಾವಂತ ತಳವಾರ, ಶ್ರೀಮತಿ ಸಾಯರಾಬಾನು ಜಮಾದಾರ, ಶ್ರೀಮತಿ ರಜಿಯಾಬೇಗಂ ಹೊರಕೇರಿ, ಶ್ರೀಮತಿ ಮಂಗಲಾ ತೇಲಿ, ಸಿಬ್ಬಂದಿಗಳಾದ ಬಿ.ಡಿ ಕುಮರೇಶಿ, ವಾಯ್.ಎನ್.ಚಲವಾದಿ ಹಾಗೂ ಗಣಪತಿ ಮೂರ್ತಿಕಾರರು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಮುದಾಯ ಸಂಘಟಕ ಎಂ.ಎ.ಪೆದಣ್ಣವರ ಕಾರ್ಯಕ್ರಮ ನಿರೂಪಿಸಿದರು.