RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಕುವೆಂಪು ಆಧಾರಿತ ಮನುಜಮತ ಅರಿಯಲು ಸಾಧ್ಯ : ಪ್ರೋ. ಎಸ್. ಆರ್. ಮುದ್ದಾರ

ಗೋಕಾಕ:ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಕುವೆಂಪು ಆಧಾರಿತ ಮನುಜಮತ ಅರಿಯಲು ಸಾಧ್ಯ : ಪ್ರೋ. ಎಸ್. ಆರ್. ಮುದ್ದಾರ 

ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಕುವೆಂಪು ಆಧಾರಿತ ಮನುಜಮತ ಅರಿಯಲು ಸಾಧ್ಯ : ಪ್ರೋ. ಎಸ್. ಆರ್. ಮುದ್ದಾರ

ಗೋಕಾಕ ಜ 1: ಮಾತೃ ಭಾಷೆಯಲ್ಲಿ ತಮ್ಮ ವಿಚಾರ ಹಾಗೂ ಅಭಿವ್ಯಕ್ತಿವನ್ನು ಅದ್ಭುತವಾಗಿ ಮಂಡಿಸುವಷ್ಟು ಬೇರೆ ಭಾಷೆಗಳ ಮೂಲಕ ಮಂಡಿಸಲು ಸಾಧ್ಯವಾಗುವುದಿಲ್ಲ ಕಾರಣ ತಾಯಿ ಭಾಷೆಯೇ ಶ್ರೇಷ್ಠವಾದ ಭಾಷೆ ಎಂಬುದನ್ನು ಕುವೆಂಪು ಮನಗಂಡಿದ್ದರು. ಕನ್ನಡ ಭಾಷೆ, ಪ್ರೇಮ ಮತ್ತು ಜಾಗೃತಿ ಕುರಿತಾದ ಕುವೆಂಪು ಅವರ ಕವಿತೆಗಳು ಕನ್ನಡಿಗರಿಗೆ ಅಮರ ಕವಿತೆಗಳಾಗಿವೆ ಎಂದು ಶ್ರೀ ಶಿವಾನಂದ ಶಿವಯೋಗಿ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೋ. ಎಸ್. ಆರ್. ಮುದ್ದಾರ ಹೇಳಿದರು.
ಅವರು ಶನಿವಾರ ದಿನಾಂಕ 30 ರಂದು ಗೋಕಾಕದ ಕೆ.ಎಲ್.ಇ. ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಿರಿಗನ್ನಡ ತಾಲೂಕಾ ವೇದಿಕೆ ಗೋಕಾಕ ವತಿಯಿಂದ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪು ಜಯಂತಿ ನಿಮಿತ್ಯ ಕಾರ್ಯಕ್ರಮದಲ್ಲಿ “ಕುವೆಂಪು ಕಾವ್ಯದಲ್ಲಿ ಕನ್ನಡ ಪ್ರೇಮ ಹಾಗೂ ಅವರ ವೈಚಾರಿಕ ನಿಲುವು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದರು.
ಭಾರತೀಯ ಸಾಹಿತ್ಯದಲ್ಲಿ ಎಡಪಂಥ ಮತ್ತು ಬಲಪಂಥವೆಂಬ ಭೇದ ಸರಿ ಹೊಂದುವುದಿಲ್ಲ ಕುವೆಂಪು ವಿಚಾರಧಾರೆಯಾದ ಮನುಜಮತದೊಂದಿಗೆ ವಿಶ್ವಪಥದೆಡೆಗೆ ಸಾಗಿ ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಮಾನವೀಯ ಮೌಲ್ಯಗಳೊಡನೆ ಶ್ರೇಷ್ಠ ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಕುವೆಂಪು ಆಧಾರಿತ ಮನುಜಮತ ಅರಿಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಉದ್ಘಾಟನೆಯನ್ನು ನೆರವೇರಿಸಿದ ಕೆ.ಎಲ್.ಇ. ಪದವಿಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೋ. ಕೆ.ಸಿ.ಹತಪಾಕಿ “ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ‘ರಾಮಾಯಣ ದರ್ಶನಂ’ ಕೃತಿ ಶ್ರೇಷ್ಠ ಕೃತಿಯಾಗಿದ್ದು ಎಲ್ಲರೂ ಓದಬೇಕು ಎಂದರಲ್ಲದೇ ಕುವೆಂಪು ನೀಡಿದ ಕನ್ನಡದ ಕಾವ್ಯಗಳು ನಮ್ಮ ನಾಡಿನ ಸಾಂಸ್ಕøತಿಕ ಆಸ್ತಿಗಳಾಗಿವೆ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿಗನ್ನಡ ವೇದಿಕೆ ಅಧ್ಯಕ್ಷ ಈಶ್ವರ ಮಮದಾಪೂರ ಮಾತನಾಡುತ್ತಾ “ಕನ್ನಡಿಗರಲ್ಲಿ ಕನ್ನಡದ ಡಿಂ ಡಿಂ ಜಾಗೃತಿ ಬಾರಿಸಿದ ಕುವೆಂಪುರವರು ಕನ್ನಡಿಗರಲ್ಲಿ ಆತ್ಮಪ್ರಜ್ಞೆಯನ್ನು ಜಾಗೃತಿಗೊಳಿಸುವುದರೊಂದಿಗೆ ‘ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ’ ಎಂದು ಕರೆ ನೀಡಿದ್ದು ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪ್ರೇಮವನ್ನು ನಾವಿಂದು ಬೆಳೆಸಿಕೊಳ್ಳಬೇಕಾಗಿದೆ. ಕನ್ನಡ ಇತಿಹಾಸ ಹಾಗೂ ಸಾಹಿತಿಗಳ ಪರಿಚಯವನ್ನು ನೀಡುವ ನಿಟ್ಟಿನಲ್ಲಿ ‘ನಮ್ಮ ನಡೆ ವಿದ್ಯಾರ್ಥಿಗಳೆಡೆ’ ಎಂಬ ನೂತನ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ.” ಎಂದರು.
ಪ್ರಾಸ್ತಾವಿಕವಾಗಿ ಚಿಂತಕ ಎಂ. ಐ. ಜೋತಾವರ ಮಾತನಾಡುತ್ತಾ “ಬೇರೆ ಭಾಷೆಗಳನ್ನು ಗೌರವಿಸುವುದರ ಜೊತೆಗೆ ಕನ್ನಡವನ್ನು ತಾಯಿ ಬಾಷೆಯಾಗಿ ಪ್ರೀತಿಸೋಣ.” ಎಂದರು.
ಮುಖ್ಯ ಅತಿಥಿಗಳಾಗಿ ಎಸ್.ಜಿ. ಪ.ಪೂ. ಮಹಾವಿದ್ಯಾಲಯ ಮರಡಿಮಠದ ಉಪನ್ಯಾಸಕರಾದ ಪ್ರೋ. ಡಿ. ಡಿ. ಹಾದಿಮನಿ, ಕೆ.ಎಲ್.ಇ. ಸಿ.ಎಸ್.ಅಂಗಡಿ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯರುಗಳಾದ ಪ್ರೋ. ಬಿ. ಎಸ್. ಬಾಸೂರ, ಪ್ರೋ. ಎಮ್. ಎ. ಪಾಟೀಲ ಉಪಸ್ಥಿತರಿದ್ದರು ಸಂಗೀತ ಕಲಾವಿದೆ ಜ್ಯೋತಿ ಕುರೇರ ಹಾಗೂ ಸಂಗಡಿಗರು ಕುವೆಂಪು ಗೀತೆಗಳಾದ ಜಯಭಾರತ ಜನನೀಯ ತನುಜಾತೆ, ಭಾರಿಸು ಕನ್ನಡ ಡಿಂ ಡಿಂ ವ, ಓ ನನ್ನ ಚೇತನ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನ ಗೆದ್ದರು.
ಜ್ಯೋತಿ ಕುರೇರ, ಮಹಾನಂದಾ ಹೊಸಮನಿ, ಸ್ನೇಹಾ ಕುರೇರ, ಶ್ರದ್ಧಾ ಹುಣಶ್ಯಾಳ, ಜ್ಯೋತಿ ಮಠಪತಿ, ಖುಷ್ಬು ಮೇದಾರ, ಆನಂದ ಮಾಳವಾದೆ, ಪ್ರೋ. ಶಿವಲೀಲಾ ಪಾಟೀಲ, ಕುಮಾರ ಬಡಿಗೇರ ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರೀಮತಿ ವ್ಹಿ.ಆರ್.ಗುರವ ಸ್ವಾಗತಿಸಿದರು, ಉಪನ್ಯಾಸಕ ಟಿ. ಪಿ. ಬಣಕಾರೆ ಪರಿಚಯ ಭಾಷಣ ಮಾಡಿದರು ಉಪನ್ಯಾಸಕಿ ಶ್ರೀಮತಿ ಹೇಮಾ ಹಿರೇಮಠ ನಿರೂಪಿಸಿದರು ಉಪನ್ಯಾಸಕಿ ಬಿ. ಎಂ. ಪಾಟೀಲ ವಂದಿಸಿದರು.

Related posts: