ಬೆಟಗೇರಿ:ಕೆಎಂಎಫ್ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿ : ಡಾ.ಜೆ.ಆರ್.ಮಣ್ಣೇರಿ
ಕೆಎಂಎಫ್ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿ : ಡಾ.ಜೆ.ಆರ್.ಮಣ್ಣೇರಿ
ಬೆಟಗೇರಿ ನ 3 : ಬೆಳಗಾವಿ ಹಾಲು ಒಕ್ಕೂಟದಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ದೊರಕುವ ವಿವಿಧ ಸಹಾಯ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಜೆ.ಆರ್.ಮಣ್ಣೇರಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸೋಮವಾರ ನ.2ರಂದು ನಡೆದ ಸನ್ 2019-20ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ವಾರ್ಷಿಕ ವರದಿ ಮಂಡಿಸಿ ಸಂಘವು ಸನ್ 2019-20ನೇ ಸಾಲಿನಲ್ಲಿ 18,76,901ರೂ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರ ಸದಸ್ಯರಿಗೆ ಶೇ 20 ರಷ್ಟು ಡಿವ್ಹಿಡೆಂಡ್, ಶೇ 65ರಷ್ಟು ಒಟ್ಟು 8,68,566ರೂ ಬೋನಸ್ ಸದಸ್ಯರಿಗೆ ವಿತರಿಸಲಾಗುವದು ಎಂದರು.
ಸಂಘದ ಅಧ್ಯಕ್ಷ ಹಣಮಂತ ಪಾಟೀಲ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ, ಸನ್2019-20ನೇ ಸಾಲಿನಲ್ಲಿ ಆಕಳು ಹಾಗೂ ಎಮ್ಮೆ ವಿಭಾಗದಲ್ಲಿ ಸ್ಥಳೀಯ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಸದಸ್ಯರಿಗೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನಗಳಿಗೆ ಹೈನುಗಾರಿಕೆ ಹಾಗೂ ಗೃಹೋಪಯೋಗ ಬಳಕೆಯ ಉಪಕರಣಗಳನ್ನು ಬಹುಮಾನವಾಗಿ ನೀಡಿ ಸನ್ಮಾನಿಸಿದರು.
ಸ್ಥಳೀಯ ಹಾಉಸ ಸಂಘದ ವತಿಯಿಂದ ಬಿಡಿಸಿಸಿ ಬ್ಯಾಂಕ್ನ ನೂತನ ನಿರ್ದೇಶಕ ಸತೀಶ ಕಡಾಡಿ ಅವರನ್ನು ಈ ವೇಳೆ ಸನ್ಮಾನಿಸಿದ ಬಳಿಕ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರ ಜೋತೆ ಶೇರ ಸದಸ್ಯರು ಸಂಘದ ಪ್ರಗತಿಯ ಕುರಿತು ಚರ್ಚಿಸಿದರು.
ಬೆಜಿಹಾಒ ಉಪ ವ್ಯವಸ್ಥಾಪಕ ಡಾ.ಎಮ್.ವಿ.ಲಕ್ಕಣ್ಣವರ, ಗೋಕಾಕ ಘಟಕದ ವಿಸ್ತರಣಾಧಿಕಾರಿ ಬೀರೇಶ ಖಿಲಾರಿ, ರವಿ ತಳವಾರ, ವಿಠಲ ಲೋಕುರಿ, ಸಂಘದ ಆಡಳಿತ ಮಂಡಳಿ ಸದಸ್ಯರು, ಶೇರ ಸದಸ್ಯರು, ಗ್ರಾಹಕರು ಇದ್ದರು.