ಗೋಕಾಕ:ಸರ್ವಾಧಿಕಾರಿ ದೋರಣೆ ಮತ್ತು ಆಡಳಿತಾತ್ಮಕ ಬದಲಾವಣೆಗೆ ನಮ್ಮ ಹೋರಾಟ ನಿರಂತರ : ಅಶೋಕ ಪೂಜಾರಿ

ಸರ್ವಾಧಿಕಾರಿ ದೋರಣೆ ಮತ್ತು ಆಡಳಿತಾತ್ಮಕ ಬದಲಾವಣೆಗೆ ನಮ್ಮ ಹೋರಾಟ ನಿರಂತರ : ಅಶೋಕ ಪೂಜಾರಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 12 :
ಗೋಕಾಕ ತಾಲೂಕಿನಲ್ಲಿರುವ ಸರ್ವಾಧಿಕಾರಿ ಮನೋಭಾವನೆಯ ರಾಜಕೀಯ, ಸಾಮಾಜಿಕ ಮತ್ತು ಆಡಳಿತಾತ್ಮಕ ಬದಲಾವಣೆಯ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕುರಿತು ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು ಮುಂಬರುವ ಗೋಕಾಕ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕುರಿತು ಇದೇ ತಿಂಗಳ ದಿ. 16 ರಿಂದ ಗೋಕಾಕ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಸಮಾನ ಮನಸ್ಕರರಾದ ಉಳಿದ ಮುಖಂಡರೊಂದಿಗೆ ಬೇಟಿ ನೀಡಿ ಮತದಾರರ ಅನಿಸಿಕೆ, ಮುಖಂಡರು ಮತ್ತು ಕಾರ್ಯಕರ್ತರ ಭಾವನೆಗಳಿಗೆ ಪೂರಕವಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ನನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ನವ್ಹೆಂಬರ ಮೊದಲ ವಾರದಲ್ಲಿ ನನ್ನ ಮಾರ್ಗದರ್ಶಕರು, ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆಯನ್ನು ಕರೆದು ಅವರೊಂದಿಗೆ ಚರ್ಚಿಸಿ ಅವರ ಭಾವನೆಗಳ ಒಟ್ಟಾಭಿಪ್ರಾಯಕ್ಕೆ ಪೂರಕವಾಗಿ ನಡೆಯುವುದಾಗಿ ತಿಳಿಸಿದ್ದಾರೆ. ನನ್ನ ಯಾವುದೇ ಮುಂದಿನ ರಾಜಕೀಯ ನಡೆ ಅವರ ಅಭಿಪ್ರಾಯಕ್ಕೆ ಪೂರಕವಾಗಿ ಇರುತ್ತದೆಯೇ ಹೊರತಾಗಿ ಯಾವುದೇ ಒತ್ತಡ ಅಥವಾ ಅಧಿಕಾರದ ಆಮಿಷಕ್ಕೆ ತಾವು ಒಳಗಾಗುವದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಗೋಕಾಕ ತಾಲೂಕಿನಲ್ಲಿ ಇತ್ತಿಚೀನ ದಿನಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಗೋಕಾಕ ತಾಲೂಕಿನಲ್ಲಿ ಸುಮಾರು 20 ವರ್ಷಗಳಿಂದ ನಿರಂತರವಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗೋಕಾಕ ತಾಲೂಕಿನ ಸರ್ವಾಧಿಕಾರಿ ಮನೋಭಾವನೆಯ ರಾಜಕೀಯ ಶಕ್ತಿಗಳೆ ಇದರ ಹಿಂದಿನ ಸೂತ್ರಧಾರರಾಗಿರುವದು ಸ್ಪಟಿಕದಷ್ಟು ಸ್ಪಷ್ಟವಾಗಿದೆ. ಆದರೆ ಈ ಚರ್ಚೆ ಈಗ ಅನೇಕರನ್ನು ಗೊಂದಲಕ್ಕೆ ಇಡು ಮಾಡಿದೆ. ಭ್ರಷ್ಟಾಚಾರದ ಸೂತ್ರಧಾರರ ಬಗ್ಗೆ ಆರೋಪ ಪ್ರತ್ಯಾರೋಪಗಳು ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಕೇಳಿಬರುತ್ತಿವೆ. ಅನೇಕರು ಈ ಕುರಿತು ಮಾತನಾಡುವಷ್ಟು ಆತ್ಮಸ್ಥೈರ್ಯ ಹೊಂದಿಲ್ಲದಿರುವದು ಕನಿಕರ ಪಡುವಂತಾಗಿದೆ. ಇದೇ ಕಾರಣದಿಂದ ಈ ಎಲ್ಲ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕೂಡಲೇ ಸರಕಾರದಿಂದ ಉನ್ನತ ಮಟ್ಟದ ತನಿಖೆಯಾಗಬೇಕಾಗಿದೆ. ಎಲ್ಲದಿದ್ದರೆ ಜನರ ಆಕ್ರೋಶ ಹೋರಾಟದ ಸ್ವರೂಪ ಪಡೆಯುವುದರಲ್ಲಿ ಎರಡು ಮಾತಿಲ್ಲವೆಂದು ಖಾರವಾಗಿ ಹೇಳಿದ್ದಾರೆ.