ಗೋಕಾಕ:ಪೌಷ್ಠಿಕ ಆಹಾರ ಕುರಿತು ತಾಯಂದಿರಲ್ಲಿ ಅರಿವು ಮೂಡಿಸಿ : ಡಾ. ಆರ್.ಎಸ್.ಬೆಣಚಿನಮರಡಿ

ಪೌಷ್ಠಿಕ ಆಹಾರ ಕುರಿತು ತಾಯಂದಿರಲ್ಲಿ ಅರಿವು ಮೂಡಿಸಿ : ಡಾ. ಆರ್.ಎಸ್.ಬೆಣಚಿನಮರಡಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 13 ;
ಪೌಷ್ಠಿಕ ಆಹಾರ ಕುರಿತು ತಾಯಂದಿರಲ್ಲಿ ಅರಿವು ಮೂಡಿಸಿ ಮಕ್ಕಳ ಆರೋಗ್ಯ ಕಾಪಾಡುವಂತೆ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಆರ್.ಎಸ್.ಬೆಣಚಿನಮರಡಿ ಹೇಳಿದರು.
ಅವರು, ಶುಕ್ರವಾರದಂದು ನಗರದ ತಾ.ಪಂ. ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗಾಗಿ ಹಮ್ಮಿಕೊಂಡ ರಾಷ್ಟ್ರೀಯ ಪೌಷ್ಠಿಕ ಆಹಾರ ಹಾಗೂ ಪೋಷಣ್ ಅಭಿಯಾನ ಮಾಹೆ ಕುರಿತು ತಾಲೂಕಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಳ್ಳೆಯ ಆಹಾರ ಪದ್ಧತಿಯಿಂದ ಮಕ್ಕಳ ಆರೋಗ್ಯ ರಕ್ಷಣೆ ಸಾಧ್ಯ. ಅಪೌಷ್ಠಿಕತೆ, ರಕ್ತಹೀನತೆ, ಕಡಿಮೆ ತೂಕದ ಮಕ್ಕಳನ್ನು ಗುರ್ತಿಸಿ ಅವರಿಗೆ ಸೂಕ್ತ ಆಹಾರ ಹಾಗೂ ಚಿಕಿತ್ಸೆಯ ಸಲಹೆಯನ್ನು ನೀಡಬೇಕು. ತಾವು ಈ ಶಿಬಿರದಲ್ಲಿ ಕಲಿತ ಮಾಹಿತಿಗಳನ್ನು ಎಲ್ಲ ತಾಯಂದಿರರಿಗೆ ಕಲ್ಪಿಸಿ ಅವರಲ್ಲಿ ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ತಾ.ಪಂ.ಕಾರ್ಯ ನಿರ್ವಾಹಕಾಧಿಕಾರಿ ಬಸವರಾಜ ಹೆಗ್ಗನಾಯಿಕ, ಸಿಡಿಪಿಓ ಅನೀಲ ಕಾಂಬ್ಳೆ, ಅಂಗನವಾಡಿ ಮೇಲ್ವಿಚಾರಕಿ ನಸ್ರೀನ ಕೊಣ್ಣೂರ, ತರಬೇತುದಾರ ಸಿದ್ಧರಾಮಪ್ಪ ಇದ್ದರು.ಬಿ.ಬಿ.ಈಶ್ವರಪ್ಪಗೋಳ ಸ್ವಾಗತಿಸಿದರು. ಆರ್.ಜಿ.ಬಸ್ಸಾಪೂರೆ ವಂದಿಸಿದರು.