ಗೋಕಾಕ:ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ : ಡಾ.ಸಿ.ಕೆ.ನಾವಲಗಿ
ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ : ಡಾ.ಸಿ.ಕೆ.ನಾವಲಗಿ
ಗೋಕಾಕ ಜ 14: ಸಾಹಿತಿ ಬರೆಯುವುದು, ಕಲಾವಿದ ಹಾಡುವದು ಬದುಕಿನ ಸೊಗಸಿಗಾಗಿ. ಕಲೆಯು ಕಲೆಗಾಗಿ ಹುಟ್ಟುತ್ತದೆ. ಕಾಲವೇ ಎಲ್ಲವನ್ನೂ ನಿರ್ಣಯಿಸುತ್ತದೆ. ಸಾಹಿತಿಯಾದವನು, ಕಲಾವಿದನಾದವನು ಪ್ರಶಸ್ತಿ-ಸನ್ಮಾನಕ್ಕಾಗಿ ಅಥವಾ ಸಮಾಜ ಗುರುತಿಸಲಿಲ್ಲ ಎಂಬ ಕೊರಗು ಬೇಡ ಎಂದು ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಿ.ಕೆ.ನಾವಲಗಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು, ಬೆಳಗಾವಿ, ಸರ್ವೇಶ್ವರ ಜಾನಪದ ಕಲಾವಿದರ ಬಳಗ, ಗೋಕಾಕ ಹಾಗೂ ಬಿಂದು ಸಂಸ್ಥೆ, ಪ್ರಭಾ ನಗರ, ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಲಕ್ಷ್ಮೀ ಬಡಾವಣೆಯಲ್ಲಿಯ ಬಸವ ಮಂದಿರದಲ್ಲಿ ಗೋಕಾಕ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಕವಿ ಮಹಾಲಿಂಗ ಮಂಗಿ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ಕರ್ನಾಟಕ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದ ಅಥಣಿ ತಾಲೂಕಿನ ಘಟನಟ್ಟಿಯ ಶ್ರೀಮತಿ ಸಾಬವ್ವ ಅಣ್ಣಪ್ಪ ಕೋಳಿ ಇವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಮಹಾಲಿಂಗ ಮಂಗಿಯವರು ಬದುಕಿನ ಆನಂದವನ್ನು ಹೆಚ್ಚಿಸಲು ಕಲೆಗಳು ಪೂರಕ, ಕಲೆಯು ಕಲೆಗಾಗಿ ಅಲ್ಲ, ಮಾನವನನ್ನು ಮಹಾಮಾನವನನ್ನಾಗಿಸುತ್ತದೆ ಎಂದು ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯೆ ಅರಭಾವಿಯ ಕೆಂಪವ್ವ ಹರಿಜನ ಹಾಗೂ ಲಕ್ಷ್ಮೀ ಹರಿಜನ ರಂಗಗೀತೆಗಳನ್ನು, ಘಟನಟ್ಟಿಯ ಅಕ್ಕವ್ವ ಮಾಂಗ, ರತ್ನವ್ವಾ ಮಾಂಗ, ಗಂಗವ್ವಾ ಮಾಂಗ, ಚಂದ್ರವ್ವ ಮಾಂಗ ಸಂಪ್ರದಾಯ ಪದಗಳನ್ನು ಹಾಡಿ ರಂಜಿಸಿದರು.
ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ, ನಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಲು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಜಾಪ ತಾಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ, ಎಲ್.ಪಿ. ಪಾಟೀಲ, ಬೈಲಾಟ ಕಲಾವಿದರಾದ ಭೀಮಪ್ಪ ಹುದ್ದಾರ, ಹೊಣ್ಣಪ್ಪ ಗೊರವ ಹಾಗೂ ಇತರರು ಉಪಸ್ಥಿತರಿದ್ದರು. ರಂಗ ಕಲಾವಿದ ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಚಂದ್ರ ಬೆಟಗೇರಿ ಸ್ವಾಗತಿಸಿದರು. ಉಪನ್ಯಾಸಕಿ ಮಹಾನಂದಾ ಪಾಟೀಲ ನಿರೂಪಿಸಿದರು. ಶಿಕ್ಷಕಿ ಶಿವಲೀಲಾ ಪಾಟೀಲ ವಂದಿಸಿದರು.