ಮೂಡಲಗಿ :ಹುಣಶ್ಯಾಳ ಪಿವಾಯ್ ಗ್ರಾಮದ ಅಭಿವೃದ್ಧಿಗೆ ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯನ್ನು ಜಾರಿಗೊಳಿಸಲಾಗಿದೆ : ಶಾಸಕ ಬಾಲಚಂದ್ರ
ಹುಣಶ್ಯಾಳ ಪಿವಾಯ್ ಗ್ರಾಮದ ಅಭಿವೃದ್ಧಿಗೆ ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯನ್ನು ಜಾರಿಗೊಳಿಸಲಾಗಿದೆ : ಶಾಸಕ ಬಾಲಚಂದ್ರ
ಮೂಡಲಗಿ ಡಿ 29 : ಹುಣಶ್ಯಾಳ ಪಿವಾಯ್ ಗ್ರಾಮದ ಅಭಿವೃದ್ಧಿಗೆ ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಹುಣಶ್ಯಾಳ ಪಿವಾಯ್ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದ ಸಿಎಂ ಗ್ರಾಮ ವಿಕಾಸ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಒಂದು ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, ಇದರಲ್ಲಿ ಕಾಂಕ್ರೀಟ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 60 ಲಕ್ಷ ರೂ, ಸಭಾ ಭವನ ನಿರ್ಮಾಣಕ್ಕೆ 12 ಲಕ್ಷ ರೂ, ಜಿಮ್ ಕಟ್ಟಡಕ್ಕೆ 12 ಲಕ್ಷ ರೂ, ಸೌರಬೆಳಕು ಅಳವಡಿಕೆಗೆ 3 ಲಕ್ಷ ರೂ, ಟಿ.ವ್ಹಿ. ಮೂಲಕ ಪ್ರಸಾರಕ್ಕೆ 2 ಲಕ್ಷ ರೂ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 6 ಲಕ್ಷ ರೂ ಹಾಗೂ ಪ್ಲೆಕ್ಸಿ ನಿಧಿಗೆ 5 ಲಕ್ಷ ರೂ, ವೆಚ್ಚ ಸೇರಿದಂತೆ ಒಟ್ಟು 1 ಕೋಟಿ ರೂ.ಗಳ ವೆಚ್ಚದಲ್ಲಿ ಗ್ರಾಮ ವಿಕಾಸ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕಾಮಗಾರಿಗಳ ಮಾಹಿತಿ ನೀಡಿದರು.
1994 ರಲ್ಲಿ ಘಟಪ್ರಭಾ ನದಿಯ ಪ್ರವಾಹ ಭೀತಿಯಿಂದ ಮುಳುಗಡೆಗೊಂಡಿದ್ದ ಸಂತ್ರಸ್ತರಿಗೆ ಮೀಸಲಿಟ್ಟಿದ್ದ 24 ಎಕರೆ ಜಮೀನಿನಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನವಗ್ರಾಮದ ಪಾಂಡಯ್ಯನ ಮಡ್ಡಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಅವರಿಗೆ ಹಕ್ಕುಪತ್ರಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಸಂತ್ರಸ್ತ ಕುಟುಂಬಗಳಿಗೆ ಭರವಸೆ ನೀಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಿರುವ 4 ಕೊಠಡಿಗಳ ನಿರ್ಮಾಣಕ್ಕೆ 12 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಹೇಳಿದ ಅವರು, ಕಡ್ಡಾಯವಾಗಿ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಂತೆ ಕೋರಿಕೊಂಡರು. ಜನೇವರಿ 10 ರಿಂದ ರೈತರ ಹಿತದೃಷ್ಟಿಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವುದಾಗಿ ಹೇಳಿದರು.
ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ರಾಮಚಂದ್ರ ಉಪ್ಪೀನ, ಅಶೋಕ ಪರುಶೆಟ್ಟಿ, ಮುತ್ತೆಪ್ಪ ನಿಡಗುಂದಿ, ಗೋಪಾಲ ಬಿಳ್ಳೂರ, ಪರಪ್ಪ ಕುಂಬಾರ, ಗ್ರಾಪಂ ಸದಸ್ಯರಾದ ಪ್ರಕಾಶ ಪಾಟೀಲ, ಪಾಯಪ್ಪ ಉಪ್ಪೀನ, ಗೋಪಾಲ ದೊಡ್ಡಗೋಳ, ಹೊಳಿಬಸು ಕುಂಬಾರ, ಶಿದ್ಲಿಂಗ ಬಿಳ್ಳೂರ, ಸ್ಥಳೀಯರಾದ ಜಡೆಪ್ಪ ಡೊಳ್ಳಿ, ವೆಂಕಪ್ಪ ಕುರುಬರ, ವೆಂಕನಗೌಡ ಪಾಟೀಲ, ಸದಾಶಿವ ರೂಗಿ, ಭುಜಭಲಿ ಉಪ್ಪೀನ, ಯಲ್ಲಪ್ಪ ಗಸ್ತಿ, ಗುತ್ತಿಗೆದಾರ ಶ್ರೀಶೈಲ ಮೂಡಲಗಿ, ಜಡೆಪ್ಪ ಕುಂಬಾರ, ಮುತ್ತೆಪ್ಪ ಬಿಳ್ಳೂರ, ಶಶಿ ದೇಶಪಾಂಡೆ, ಮುಂತಾದವರು ಉಪಸ್ಥಿತರಿದ್ದರು.