ಗೋಕಾಕ:ಸೈನಿಕ(ಲದ್ದಿ) ಹುಳುವಿನ ಭಾದೆ ನಿರ್ವಹಣೆ ಕ್ರಮ ಕೈಗೊಳ್ಳಿ : ಕೃಷಿ ಅಧಿಕಾರಿ ಎ.ಡಿ.ಸವದತ್ತಿ ಸಲಹೆ
ಸೈನಿಕ(ಲದ್ದಿ) ಹುಳುವಿನ ಭಾದೆ ನಿರ್ವಹಣೆ ಕ್ರಮ ಕೈಗೊಳ್ಳಿ : ಕೃಷಿ ಅಧಿಕಾರಿ ಎ.ಡಿ.ಸವದತ್ತಿ ಸಲಹೆ
ಗೋಕಾಕ ಜು 5 : ಇತ್ತಿಚಿನ ದಿನಗಳಲ್ಲಿ ತಾಲೂಕಿನ ಮಮದಾಪೂರ, ಮರಡಿ ಶಿವಾಪೂರ, ಹೀರೆನಂದಿ, ತುಕ್ಕಾನಟ್ಟಿ, ಅರಭಾವಿ, ಮೆಳವಂಕಿ ಅಡಿಬಟ್ಟಿ ಭಾಗಗಳಲ್ಲಿ ಮುಸುಕಿನ ಜೋಳ ಮತ್ತು ಜೋಳಕ್ಕೆ ಸೈನಿಕ(ಲದ್ದಿ) ಹುಳುವಿನ ಭಾದೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಎ.ಡಿ.ಸವದತ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈ ಕೀಡೆಗಳು ಸ್ವಲ್ಪ ಸಮಯದಲ್ಲಿ ಹೆಚ್ಚು ಆಹಾರವನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ಲದ್ದಿಯನ್ನು ಎಲೆ ಮತ್ತು ಸುಳಿಗಳಲ್ಲಿ ಹಾಕುವುದರಿಂದ ಇದನ್ನು ಲದ್ದಿ ಹುಳು ಎಂದು ಕರೆಯಲಾಗುತ್ತದೆ
ಬಾಧೆಯ ಲಕ್ಷಣಗಳು: ತತ್ತಿಯಿಂದ ಹೊರಬಂದ ಮರಿಹುಳುಗಳು ಗುಂಪು ಗುಂಪಾಗಿ ಎಲೆಯ ಅಂಚುಗಳನ್ನು ತಿನ್ನುವುದರಿಂದ ಎಲೆಯ ಮದ್ಯನರವೊಂದನ್ನು ಬಿಟ್ಟು ಉಳಿದೆಲ್ಲ ಭಾಗವನ್ನು ಪೂರ್ತಿಯಾಗಿ ತಿಂದು ನಾಶಪಡಿಸುತ್ತವೆ. ಸಾಮಾನ್ಯವಾಗಿ ಈ ಕೀಟಗಳು ಹಗಲು ವೇಳೆಯಲ್ಲಿ ಮಣ್ಣಿನಲ್ಲಿ ಅವಿತುಕೋಂಡು ರಾತ್ರಿ ಸಮಯದಲ್ಲಿ ಹೊರಬಂದು ತೀವ್ರತರವಾದ ಹಾನಿಯನ್ನುಂಟು ಮಾಡುತ್ತವೆ.
ನಿರ್ವಹಣೆ ಕ್ರಮಗಳು: ಬೆಳೆಯ ಎತ್ತರ ಕಡಿಮೆಯಿದ್ದಲ್ಲಿ ಮೆಲಾಥಿಯಾನ 5% ಎಕರೆಗೆ 10 ಕೆಜಿಯಂತೆ ಧೂಳಿಕರಿಸಿ ಅಥವಾ ಲ್ಯಾಮಡಾ ಸೈಲೋಹೆಥ್ರಿನ್ 2.5 ಇಸಿ 1 ಮಿ.ಲಿ ಅಥವಾ ಎಮಾಮೆಕ್ಟಿನ್ ಬೆಂಜೋಯೆಟ್ 5 ಎಸ್.ಜಿ.ಯನ್ನು 0.2 ಗ್ರಾ ಅಥವಾ ಸ್ಪೈನೋಸ್ಯಾಡ್ 45 ಎಸ್.ಸಿ ಯನ್ನು 0.2 ಮಿ.ಲೀ.ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಮೇಲೆ ಸಿಂಪರಣೆ ಮಾಡಬಹುದಾಗಿದೆ. ಬೆಳೆಯು ಎತ್ತರವಾಗಿದ್ದಲ್ಲಿ ಕಳಿತ ವಿಷ ಪಾಷಾಣದ ಬಳಕೆಯಿಂದ ಈ ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು
ವಿಷಪಾಷಾಣದ ತಯಾರಿಸುವ ವಿಧಾನ: ಒಂದು ಎಕರೆಗೆ 20ಕಿಲೋ ಭತ್ತ ಅಥವಾ ಗೋಧಿ ತವಡಿ(ಹೊಟ್ಟು)ನೊಂದಿಗೆ 2ಕಿಲೋ ಬೆಲ್ಲ, 250 ಮೀ ಮೊನೊಕ್ರೋಟೋಪಾಸ್ 36 ಎಸ್ಎಲ್ ಮತ್ತು 4 ರಿಂದ 5 ಲೀಟರ ನೀರಿನೊಂದಿಗೆ ಬೆರೆಸಿ, ರಾತ್ರಿಯಿಡಿ ಚೀಲದಲ್ಲಿ ಕಳಿಯಲು(ನೆನೆಯಲು) ಬಿಟ್ಟು ಸಾಯಂಕಾಲ ಬೆಳೆಯ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು ಕೀಡೆಗಳು ವಿಷಪಾಷಾಣಕ್ಕೆ ಬೇಗನೆ ಆಕರ್ಷಿತಗೊಂಡು ತಿನ್ನುವುದರಿಂದ ಬಹು ಬೇಗನೆ ಹತೋಟಿ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಶೀಲಿಂದ್ರ ಜನ್ಯ ಕೀಟನಾಶಕಗಳಾದ ಬೆವೆರಿಯಾ ಬೆಸಿಯಾನಾ ಅಥವಾ ನ್ಯೂಮೊರಿಯಾ ರಿಲೈಗಳನ್ನು ಒಂದು ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿಬೇಕೆಂದು ಎ.ಡಿ.ಸವದತ್ತಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.