ವಿಶೇಷ ಲೇಖನ :ಪ್ರಜಾಪ್ರಭುತ್ವ ಹಾಗೂ ಮತದಾನ
ಪ್ರಜಾಪ್ರಭುತ್ವ ಹಾಗೂ ಮತದಾನ
ಕಳೆದ ಏಳುವರ್ಷಗಳಿಂದ ಭಾರತದ ಘನ ಸರಕಾರವು ನಾಳೆ ಜನೇವರಿ 25 ರಂದು “ಮತದಾರರ ದಿನ” ವೆಂದು ಘೋಷಿಸಿ ಅಂದು ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಸಮಾಲೋಚನೆ, ನಿಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ , ವಿದ್ಯುನ್ಮಾನ ಮತಯಂತ್ರಗಳ ಬಳಕೆ ವಿಧಾನ, ಚುನಾವಣೆ ನೀತಿಸಂಹಿತೆ ಸಮಯದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ವಿಷಯಗಳಲ್ಲದೇ ಇತರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿ ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸುವ ಕಾರ್ಯ ಮಾಡುತ್ತಿದೆ ಈ ದಿನದ ಕುರಿತು ನಗರದ ಎಪಿಜೆ ಅಬ್ದುಲ್ ಕಲ್ಲಾಂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಸ್.ಎಂ.ಪೀರಜಾದೆ ಅವರು “ಪ್ರಜಾಪ್ರಭುತ್ವ ಹಾಗೂ ಮತದಾನ” ಎಂಬ ವಿಷಯದಡಿ ವಿಶೇಷ ಲೇಖವನ್ನು ಬರೆದಿದ್ದಾರೆ
ಪ್ರಜಾಪ್ರಭುತ್ವ ಹಾಗೂ ಮತಾಧಿಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದು ಪ್ರಜಾಪ್ರಭುತ್ವದ ಪರಿಕಲ್ಪನೆ ಸಾಕಾರಗೊಳ್ಳುವುದೇ ಮತಾಧಿಕಾರದ ಮೂಲಕ. ಮತದಾರರು ಪ್ರಜಾಪ್ರಭುತ್ವದ ಚುನಾವಣೆಯ ಕೇಂದ್ರ ಪಾತ್ರಧಾರಿಗಳು. ಪ್ರಜಾಪ್ರಭುತ್ವ ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರ ಪಾತ್ರ ತುಂಬಾ ಪ್ರಮುಖವಾಗಿದ್ದು ಅವುಗಳ ಯಶಸ್ಸು, ವಿಫಲತೆಗಳು ಮುಖ್ಯವಾಗಿ ಪ್ರಜೆಗಳು ತಮ್ಮ ಮತಾಧಿಕಾರವನ್ನು ಎಷ್ಟು ಸಕಾರಾತ್ಮಕವಾಗಿ, ಸಕ್ರಿಯವಾಗಿ ನಿರ್ವಹಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಿರುತ್ತದೆ ವಿನಃ ವ್ಯಕ್ತಿಗತ ಇಚ್ಛೆ ಅಥವಾ ಕಾಮನೆಗಳಿಂದಲ್ಲ.
ಪ್ರಜೆಗಳೇ ಪ್ರಭುಗಳಾಗಿದ್ದು, ಜನಾಭಿಪ್ರಾಯ ಹಾಗೂ ಜನತಾ ಪರಮಾಧಿಕಾರ ಬಿಂಬಿಸುವ ಆಡಳಿತ ವ್ಯವಸ್ಥೆಯನ್ನು ಪ್ರಜಾಪ್ರಭುತ್ವವೆನಿಸುತ್ತದೆ. ಅಂತಿಮ ನಿರ್ಣಾಯಕ ರಾಜಕೀಯ ಪರಮಾಧಿಕಾರವು ಸಮಸ್ತ ಜನತೆಯ ಕೈಯಲ್ಲಿದ್ದು ಅವರ ಆಶೋತ್ತರದಂತೆ ಆಡಳಿತ ನಿರ್ವಹಿಸಲ್ಪಡುತ್ತದೆ.
ಭಾರತವನ್ನು ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವೆಂದು ಬಣ್ಣಿಸುತ್ತಾರೆ. ಆದರೆ ದುರಂತ ನೋಡಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡು ಸರಿಸುಮಾರು 68 ವರ್ಷಗಳಾಗುತ್ತಾ ಬಂದರೂ ಪ್ರಜಾಪ್ರಭುತ್ವ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿರುವದಿಲ್ಲ. ಹಲವಾರು ಲಕ್ಷಾಂತರ ಮತದಾರರು ಮತವನ್ನು ಚಲಾಯಿಸಲು ಬಾರದಿರುವದು, ಚುನಾಯಿಸದಿರುವದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅರ್ಹ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದಿರವದು ಭಾರತದ ಪ್ರಜಾಪ್ರಭುತ್ವಕ್ಕೆ ಹೆಗ್ಗಳಿಕೆ ತರದಂತಾಗಿದೆ. ಒಂದು ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭೆಯವರೆಗಿನ ಚುನಾವಣೆಯಲ್ಲಿ ಮತದಾನದ ಸರಾಸರಿ ಪ್ರಮಾಣ ಶೇ.40 ರಿಂದ 60 ರವರೆಗೆ ಮಾತ್ರವಿರುತ್ತದೆ. ಇದರ ಹಿಂದಿರುವ ಹಿನ್ನೆಲೆ ಗಮನಿಸಿದಾಗ ವಿವಿಧ ರೀತಿಯ ಅಸಮಾನತೆ, ಅನಕ್ಷರತೆ, ಕೋಮುವಾದ, ಮತೀಯವಾದ, ಜಾತಿವಾದ, ಭಾಷಾವಾದಗಳು ಕಂಡುಬರುತ್ತವೆ.
ಪ್ರಜಾಪ್ರಭುತ್ವದ ಮೂಲಾಧಾರ ಪ್ರಜೆಗಳು ಹೊಂದಿರುವ ರಾಜಕೀಯ ಪ್ರಜ್ಞೆ, ಪ್ರಭುದ್ಧತೆ ಹಾಗೂ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿದೆ. ಇದು ಮುಖ್ಯವಾಗಿ ಮತಾಧಿಕಾರದ ಚಲಾವಣೆಯ ಮೇಲೆ ವ್ಯಕ್ತವಾಗುತ್ತದೆ. ಮತಾಧಿಕಾರ ಪ್ರಜಾಪ್ರಭುತ್ವದ ಅಮೂಲ್ಯ ಕೊಡುಗೆಯಾಗಿದೆ. ಇದು ಒಂದು ಬ್ರಹ್ಮಾಸ್ತ್ರ ರಾಜ್ಯಶಾಸ್ತ್ರದ ದೃಷ್ಟಿಕೋನದ ಪ್ರಕಾರ ದಾನಗಳಲ್ಲಿ ಶ್ರೇಷ್ಠ ದಾನ ಮತದಾನವಾಗಿರುತ್ತದೆ. ಕಾರಣ ಇದು ರಾಷ್ಟ್ರದ ಭವಿಷ್ಯದ ಗತಿಯನ್ನೇ ಬದಲಾಯಿಸಬಲ್ಲ ಹಾಗೂ ಸತ್ಯ, ಸಭ್ಯ, ಪ್ರಾಮಾಣಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಒಂದು ಸಮರ್ಥ ಸಾಧನವಾಗಿರುತ್ತದೆ. ಮತಾಧಿಕಾರ ಎನ್ನುವದು ಪುಗಸಟ್ಟೆ ಪುನಗಲ್ಲು ಅಲ್ಲ. ಇದು ಅತ್ಯಂತ ಶ್ರೇಷ್ಠ, ಪವಿತ್ರ ಕಾರ್ಯವಾಗಿದ್ದು ಇದರ ಮಹತ್ವ ಅರಿಯುವ ಅವಶ್ಯಕತೆಯಿದೆ. ಒಂದು ಚಿಂತಕ ವರ್ಗದ ಪ್ರಕಾರ ಮತಾಧಿಕಾರ ಮಾಣಿಕ್ಯದಂತಿದ್ದು ನಿರ್ಧಿಷ್ಟ ಅರ್ಹತೆ, ದಕ್ಷತೆ, ಸ್ಥಾನಮಾನವಿದ್ದವರಿಗೆ ಮಾತ್ರ ನೀಡಬೇಕೆನ್ನುತ್ತಾರೆ. ಆದರೆ ಇನ್ನೊಂದು ವರ್ಗವು ಪ್ರಜಾಪ್ರಭುತ್ವದ ನಿಜವಾದ ಅರ್ಥ ಯಾವುದೇ ಅಂತರವಿಲ್ಲದೇ ಸಾರ್ವತ್ರಿಕವಾಗಿ ವಯೋಮಿತಿಯ ಆಧಾರದ ಮೇಲೆ ಮತಾಧಿಕಾರ ನೀಡಬೇಕೆಂದು ಆಗ್ರಹಿಸುತ್ತಾರೆ. ಆ ನಿಟ್ಟಿನಲ್ಲಿ ನಮ್ಮ ಭಾರತ ದೇಶದ ಸಂವಿಧಾನವು 18 ವರ್ಷ ತಲುಪಿದ ಎಲ್ಲರಿಗೂ ಮತದಾನದ ಹಕ್ಕನ್ನು ಒದಗಿಸಿ ಸರ್ಕಾರ ರಚನೆ ಹಾಗೂ ಅಧಿಕಾರ ಪಾಲ್ಗೊಳ್ಳುವಿಕೆಯಲ್ಲಿ ಸಮಾನ ಅವಕಾಶ ನೀಡಿರುತ್ತದೆ.
ಆದರೆ ಮೂಲಭೂತ ಪ್ರಶ್ನೆ ಏನೆಂದರೆ, ಎಷ್ಟರ ಮಟ್ಟಿಗೆ ನಾವಿಂದು ನಮ್ಮ ಮತದ ಮೌಲ್ಯವನ್ನು ಅರಿತಿದ್ದೇವೆ? ವಿದ್ಯಾವಂತರು, ನೌಕರದಾರರೂ ಸೇರಿದಂತೆ ಕಡ್ಡಾಯವಾಗಿ ಯಾವುದೇ ಕ್ಷುಲ್ಲಕ ಆಮೀಷಗಳಿಗೆ, ಭಾವೋದ್ರೇಕಗಳಿಗೆ ಒಳಗಾಗದೇ ಪ್ರಾಮಾಣಿಕವಾಗಿ ಮತಚಲಾಯಿಸುತ್ತಿದ್ದೇವೆ? ಈ ಸಂಬಂಧ ಆತ್ಮವಿಮರ್ಶೆಯ ಅವಶ್ಯಕತೆಯಿದೆ. ಸಾಕಷ್ಟು ಜನರು, “ಶ್ರೀರಾಮಚಂದ್ರನ ಆಡಳಿತ ಬಂದರೂ ರಾಗಿ ಬೀಸುವದು ತಪ್ಪುವದಿಲ್ಲ” ಎಂದು ಗೊಣಗುತ್ತ ಮತದಾನದಿಂದ ವಿಮುಖರಾಗುತ್ತಾರೆ. ಆದರೆ ಇದು ತಪ್ಪು. ಕಲ್ಯಾಣರಾಜ್ಯವನ್ನಾಗಿಸುವ ರಾಜಕೀಯ ಪಕ್ಷ, ಸರಳ ಸಜ್ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸದವಕಾಶವನ್ನು ಪ್ರಜಾಪ್ರಭುತ್ವವು ಮತದಾನದ ಹಕ್ಕಿನ ಮೂಲಕ ನಮಗೆ ಒದಗಿಸಿರುತ್ತದೆ. ಅಸಮರ್ಥ, ಅದಕ್ಷ, ಭ್ರಷ್ಟ ಸರಕಾರ ಹಾಗೂ ಅಭ್ಯರ್ಥಿಗಳ ಆಯ್ಕೆಯಾಗಲು ಕಾರಣಕರ್ತರು ನಾವಲ್ಲವೇ? ಇಂದು ಧರ್ಮ, ಜಾತಿ, ಪ್ರದೇಶ, ಗಡಿ, ಜಲ, ಭಾಷೆ, ಸಂಸ್ಕಂತಿಗಳ ಆಧಾರದ ಮೇಲೆ ರಾಜಕಾರಣ ಮಾಡುವ ಹಾಗೂ ಕಳ್ಳಬಟ್ಟಿ ಧಂದೆ, ಕೊಲೆ, ಸುಲಿಗೆ, ಅತ್ಯಾಚಾರ, ಹಗರಣಗಳನ್ನು ಎಸಗಿ ಜೈಲು ಪಾಲಾಗಿರುವ ಅಲ್ಲದೇ ಸಭೆ-ಸಮಾರಂಭಗಳಲ್ಲಿ ನೀಲಿಚಿತ್ರ ನೋಡುವ, ಗೊರಕೆ ಹೊಡೆಯುವವರನ್ನು ನಾವು ಚುಣಾಯಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುವದಲ್ಲವೇ?
ಪ್ರಖ್ಯಾತ ರಾಜಕೀಯ ಚಿಂತಕನಾದ ಜೆ.ಎಸ್.ಮಿಲ್ ರವರು, “ಮತದಾರನು, ಮತದಾನವನ್ನು ಒಂದು ಸಾಮಾಜಿಕ-ಧಾರ್ಮಿಕ-ನೈತಿಕ ಕರ್ತವ್ಯವೆಂದು ಭಾವಿಸಿ ಅತ್ಯುತ್ತಮ, ಸುಸಂಸ್ಕøತ, ಸಜ್ಜನ, ಸಮಾಜಮುಖಿ ಸಂಸದೀಯ ಪಟುಗಳನ್ನು ಆಯ್ಕೆ ಮಾಡಬೇಕೆಂದು ತನ್ನ ಗ್ರಂಥವಾದ “ದಿ ರಿಪ್ರೆಜೆಂಟೆಟಿವ್ ಗವರ್ನಮೆಂಟ್”ದಲ್ಲಿ ಅಭಿಪ್ರಾಯ ಪಡುತ್ತಾರೆ.
ಪ್ರಜಾಪ್ರಭುತ್ವದ ಮೇಲಾಗುತ್ತಿರುವ ಅತಿದೊಡ್ಡ ಅತ್ಯಾಚಾರ, ಅಪಮಾನ ಎಂದರೆ ಮತಬ್ಯಾಂಕ್ ರಾಜಕಾರಣ ಇಂದು ಮತದಾರನನ್ನು ಓರ್ವ ಮತದಾರನೆಂದು ಪರಿಗಣಿಸದೇ ಆತನೊಬ್ಬ ನಿರ್ದಿಷ್ಟ ಧರ್ಮ, ಜಾತಿ, ಕೋಮಿಗೆ ಸೇರಿದವನೆಂದು ಕಾಣುತ್ತಿರುವದು ಒಳ್ಳೆಯ ಬೆಳವಣಿಗೆಯಲ್ಲ. ಭವ್ಯಭಾರತದ ಏಕತೆ, ಸಮಗ್ರತೆ, ಸುರಕ್ಷೆ, ಸಮ್ಮಿಶ್ರ ಸಂಸ್ಕøತಿಗೆ ಮಾರಕವೆನಿಸುವ ರಾಜಕೀಯ ಪಕ್ಷಗಳನ್ನು ದಿಕ್ಕರಿಸಿ ಹಾಗೂ ಅಧಿಕಾರದ ಮದ ತಲೆಗೇರಿಸಿಕೊಂಡು ಒಡೆದು ಆಳುವ ನೀತಿಯನ್ನು ಅನುಸರಿಸುವ ಅಕ್ರಮ ಅವ್ಯವಹಾರಗಳಲ್ಲಿ ತೊಡಗಿರುವ ಸ್ವಾರ್ಥ ರಾಜಕಾರಣಿಗಳನ್ನು ದೂರವಿರಿಸಿ, “ಸರ್ವೆಜನಾ ಸುಖಿನೊ ಭವಂತು” ಎಂಬ ಉಕ್ತಿಯನ್ನು ಸಾಕಾರಗೊಳಿಸುವ ಭಾರತವನ್ನು ಒಂದಾಗಿ ಮುನ್ನಡೆಸುವ ರಾಜಕೀಯ ಪಕ್ಷ ಹಾಗೂ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮತದಾರರು ಮುಂದಾಗಲಿ.
ಪ್ರತಿಯೊಬ್ಬ ಪ್ರಜೆ ಮತದಾನವನ್ನು ಕಡ್ಡಾಯವಾಗಿ ಚಲಾಯಿಸಬೇಕು. ಇಲ್ಲದಿದ್ದರೆ ಆತನಿಗೆ ಯಾವುದೇ ಸರಕಾರಿ ಸೌಲಭ್ಯ, ರಿಯಾಯ್ತಿ, ಪ್ರಶಸ್ತಿ ನೀಡಬಾರದು. ಈ ನಿಟ್ಟಿನಲ್ಲಿ ಕಾನೂನು ರಚನೆಯಾಗಬೇಕೆಂಬ ಚಿಂತನೆ ನಡೆಯುತ್ತಿದೆ. ಆದರೆ ಪ್ರಜ್ಞಾವಂತ ಪ್ರಜೆಗಳು ಮತದಾನವು ತಮ್ಮ ಮೂಲಭೂತ ಕರ್ತವೆಂಬುದನ್ನು ಅರಿತು ಕಡ್ಡಾಯವಾಗಿ ಸ್ವಯಂಪ್ರೇರಣೆಯಿಂದ ಮತ ಚಲಾಯಿಸುವಂತಾಗಬೇಕು. ಒಂದು ವೇಳೆ ಸೂಕ್ತ ಅಭ್ಯರ್ಥಿ ಯಾರೂ ಕಂಡುಬರದಿದ್ದರೆ ಇ.ವಿ.ಎಂ. ದಲ್ಲಿ ‘ನೋಟಾ’ ಎಂದರೆ ಈ ಮೇಲಿನವರಾರೂ ನನ್ನ ಆಯ್ಕೆಯಲ್ಲ ಎಂಬ ಗುಂಡಿಯನ್ನು ಒತ್ತಿಯಾದರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಾಗಲಿ.
ದೇಶವನ್ನು ಉನ್ನತಿ ಅಥವಾ ಅವನತಿಯೆಡೆಗೆ ಮುನ್ನಡೆಸುವ ಅಧಿಕಾರ ಚುಕ್ಕಾಣಿಯನ್ನು ರಾಜಕೀಯ ಪಕ್ಷ ಹಾಗೂ ಪ್ರತಿನಿಧಿಗಳಿಗೆ ಮತದಾನದ ಮೂಲಕ ನೀಡುವದಕ್ಕಿಂತ ಮುಂಚೆ ಮತದಾರರು ಮಾನಸಿಕವಾಗಿ, ನೈತಿಕವಾಗಿ ಸಿದ್ಧಗೊಂಡು ರಾಜಕೀಯ ಪಕ್ಷಗಳ, ಅಭ್ಯರ್ಥಿಗಳ ತತ್ವ-ಸಿದ್ಧಾಂತ, ಬದ್ಧತೆಗಳನ್ನು ಸಮಗ್ರವಾಗಿ ಅಭ್ಯಸಿಸಿ ಇ.ವಿ.ಎಂ.ಗಳ ಮೂಲಕ ಮತ ಚಲಾಯಿಸುವ ವಿಧಾನವನ್ನು ತಿಳಿದುಕೊಂಡು ನಿಷ್ಕಲ್ಮಶ-ನಿಷ್ಕಪಟ ಮನಸ್ಸಿನಿಂದ ಮತ ಚಲಾಯಿಸುವಂತಾಗಲಿ.
ಮತದಾರರಲ್ಲಿ ಮತದಾನದ ಕುರಿತು ಜಾಗೃತಿಯನ್ನುಂಟು ಮಾಡುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗವು ಜನೇವರಿ 25, 2011 ರಂದು ಮೊದಲ ಬಾರಿಗೆ ‘ಮತದಾರರ ದಿನ’ವೆಂದು ಘೋಷಿಸಿ ಆ ನಿಟ್ಟಿನಲ್ಲಿ ಚರ್ಚೆ, ಸಮಾಲೋಚನೆ, ನಿಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳ ಮೂಲಕ, ವಿದ್ಯುನ್ಮಾನ ಮತಯಂತ್ರಗಳ ಬಳಕೆ ವಿಧಾನ, ಚುನಾವಣೆ ನೀತಿಸಂಹಿತೆ ಸಮಯದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ವಿಷಯಗಳಲ್ಲದೇ ನೈತಿಕ ಮತದಾನದ ಕುರಿತು ಅರಿವು ಮೂಡಿಸುತ್ತಿರುವದು ಸ್ತುತ್ಯಾರ್ಹ ಕಾರ್ಯವಾಗಿದೆ.
ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಪ್ರಜೆಗಳ ಪ್ರಭುತ್ವವನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ರಾಷ್ಟ್ರೀಯ ಮತದಾರರ ದಿನದ ವಾಗ್ದಾನ ಮಾಡೋಣ ಬನ್ನಿ.
“ಭಾರತದ ಪ್ರಜೆಗಳಾದ ನಾವು ಪ್ರಜಾಪ್ರಭುತ್ವದಲ್ಲಿ ಶಾಶ್ವತ ವಿಶ್ವಾಸವಿಟ್ಟು, ಈ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ಮತ್ತು ಸ್ವಾತಂತ್ರ್ಯದ ಹಿರಿಮೆ ಎತ್ತಿ ಹಿಡಿಯುವ ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆ ಹಾಗೂ ಮತೀಯ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಮನವೊಲಿಕೆಯ ಪ್ರಭಾವಕ್ಕೆ ಒಳಗಾಗದೇ ಎಲ್ಲಾ ಚುನಾವಣೆಯಲ್ಲಿ ನಿರ್ಭಯವಾಗಿ ಮತದಾನ ಮಾಡಲು ವಾಗ್ದಾನ ಮಾಡುತ್ತೇನೆ.”
ಎಸ್. ಎಮ್. ಪೀರಜಾದೆ
ರಾಜ್ಯಶಾಸ್ತ್ರ ಉಪನ್ಯಾಸಕರು,
ಅಬುಲ್ ಕಲಾಂ ಅಜಾದ್ ಪದವಿ ಪೂರ್ವ ಮಹಾವಿದ್ಯಾಲಯ, ಗೋಕಾಕ