ಗೋಕಾಕ:ಯುವ ಜನಾಂಗದಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಪರಿಷತ್ ಶ್ರಮಿಸುತ್ತದೆ : ಮೆಟಗುಡ್ಡ
ಯುವ ಜನಾಂಗದಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಪರಿಷತ್ ಶ್ರಮಿಸುತ್ತದೆ : ಮೆಟಗುಡ್ಡ
ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಏ 12 :
ಕನ್ನಡ ಸಾಹಿತ್ಯ ಶ್ರೀಮಂತ ಗೊಳಿಸಿದ ಕವಿಗಳ ಪುಸ್ತಕಗಳ ಹಾಗೂ ಅವರ ಆದರ್ಶಗಳನ್ನು ಯುವ ಜನಾಂಗಕ್ಕೆ ಪರಿಚಯಿಸಿ ಅವರಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಪರಿಷತ್ ಶ್ರಮಿಸುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು
ಮಂಗಳವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಶಾಲಾ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಗೋಕಾಕ ಹಾಗೂ ಗೋಕಾಕ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ದಿ.ಬೆಟಗೇರಿ ಕೃಷ್ಣಶರ್ಮ ಅವರ ದತ್ತಿ ಕಾರ್ಯಕ್ರಮದ ನಿಮಿತ್ತ ಉಪನ್ಯಾಸ ಹಾಗೂ ಅವರ ಕಾವ್ಯ ಗಾಯನ ಮತ್ತು ದಿ.ಪ್ರೋ.ಜ್ಯೋತಿ ಹೊಸೂರು ಅವರ ಬದುಕು ಬರಹ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಮಹಿಳೆಯರು ಕನ್ನಡ ಬೆಳೆಸುವ ಕೆಲಸಕ್ಕೆ ಮುಂದಾಗಬೇಕು. ಪ್ರಾಥಮಿಕ ಶಾಲೆಗಳು ಕನ್ನಡ ಭಾಷೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಆ ಶಾಲೆಗಳಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು.
ಗಡಿಭಾಗದಲ್ಲಿ ಕನ್ನಡ ಭಾಷೆಯನ್ನು ಗಟ್ಟಿಗೊಳಿಸಬೇಕಾಗಿದೆ ಇದಕ್ಕೆ ಕನ್ನಡಾಭಿಮಾನಿಗಳ ಸಹಕಾರ ಅತಿ ಅವಶ್ಯಕವಾಗಿದೆ. ನಾವೆಲ್ಲರೂ ಕೂಡಿ ನಮ್ಮ ನಾಡು ನುಡಿ ಬೆಳೆಸಲು ಶ್ರಮಿಸೋಣ ಎಂದು ಹೇಳಿದರು.
ದಿವಂಗತ ಪ್ರೋ.ಜ್ಯೋತಿ ಹೊಸೂರ ಬದುಕು ಬರಹ ಕುರಿತು ಬೆಳಗಾವಿಯ ಸಾಹಿತಿ ಎ.ಎ ಸನದಿ ಹಾಗೂ ದಿ.ಬೆಟಗೇರಿ ಕೃಷ್ಣಶರ್ಮ ಅವರ ಆನಂದ ಕಾವ್ಯ ಕುರಿತು ಪ್ರೋ ಚಂದ್ರಶೇಖರ್ ಅಕ್ಕಿ ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಜಿ.ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ಈಶ್ವರ ಹೋಟಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಮಹಾಂತೇಶ ಮೆನಶಿನಕಾಯಿ , ಮಾಜಿ ಕಸಾಪ ಅಧ್ಯಕ್ಷ ಮೋಹನ ಪಾಟೀಲ, ಸುರೇಶ್ ಹಂಜಿ, ಆರ್.ಎಂ ವಾಲಿ, ವಿ.ವಿ ಮೋದಿ, ಸಂಜಯ ಶಿಂಧಿಹಟ್ಟಿ , ಕಸಾಪ ತಾಲೂಕು ಅಧ್ಯಕ್ಷೆ ಭಾರತಿ ಮದಬಾಂವಿ ಸೇರಿದಂತೆ ಇತರರು ಉಪಸ್ಥಿತರಿದ್ದರು