ಗೋಕಾಕ:ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕಿನಲ್ಲಿ ಕರವೇ ಪ್ರತಿಭಟನೆ
ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕಿನಲ್ಲಿ ಕರವೇ ಪ್ರತಿಭಟನೆ
ಗೋಕಾಕ ಅ 23: ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮಕ್ಕೆ ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಇಂದು ಮುಂಜಾನೆ ನಗರದ ಬಸ್ ನಿಲ್ದಾಣ ಘಟಕ ವ್ಯವಸ್ಥಾಪಕರ ಕಛೇರಿ ಎದುರು ಸೇರಿದ ಕ.ರ.ವೇ ಕಾರ್ಯಕರ್ತರು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಳೆದ ಹಲವಾರು ವರ್ಷಗಳಿಂದ ಪಾಮಲದಿನ್ನಿ ಗ್ರಾಮಕ್ಕೆ ಗೋಕಾಕದಿಂದ ಬಸ್ ಸಂಚರಿಸುತ್ತಿದ್ದು, ಅದನ್ನು ಕೆಲವು ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಪಾಮಲದಿನ್ನಿ ಗ್ರಾಮದಿಂದ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ವ್ಯಾಪಾರಸ್ಥರಿಗೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದರೂ ಯಾವುದೇ ಪ್ರಯೋಜನೆವಾಗಿಲ್ಲ. ಪಾಮಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 12000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ಪ್ರತಿ ನಿತ್ಯ ಪಾಮಲದಿನ್ನಿಯಿಂದ ಘಟಪ್ರಭಾ ಮತ್ತು ಗೋಕಾಕಕ್ಕೆ ನೂರಾರು ಜನರು ವ್ಯಾಪಾರು, ವಹಿವಾಟುಗಾಗಿ ಶಾಲಾ ಕಾಲೇಜುಗಳಿಗಾಗಿ ಸಂಚರಿಸುತ್ತಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಸಾರಿಗೆ ಅಧಿಕಾರಿಗಳು ಪ್ರತಿನಿತ್ಯ 4ರಿಂದ 5ಬಾರಿ ಗೋಕಾಕದಿಂದ ಪಾಮಲದಿನ್ನಿ ಗ್ರಾಮಕ್ಕೆ ಸಂಚರಿಸುತ್ತಿದ್ದ ಗೋಕಾಕ ಪಾಮಲದಿನ್ನಿ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಈ ಕೂಡಲೇ ಸ್ಥಗಿತಗೊಂಡಿರುವ ಬಸ್ನ್ನು ಆದಷ್ಟೂ ಬೇಗ ಮೊದಲು ಸಂಚರಿಸುತ್ತಿದ್ದ ವೇಳಾಪಟ್ಟಿಯ ಪ್ರಕಾರ ಪಾಮಲದಿನ್ನಿಯಿಂದ ಗೋಕಾಕಕ್ಕೆ ಬೆಳಿಗ್ಗೆ 8-00 ಗಂಟೆಗೆ ಹಾಗೂ ಬೆಳಿಗ್ಗೆ 10-00 ಗಂಟೆಗೆ ಮತ್ತು ಗೋಕಾಕದಿಂದ ಪಾಮಲದಿನ್ನಿಗೆ ಮಧ್ಯಾಹ್ನ 1 ಗಂಟೆಗೆ ಹಾಗೂ ಸಂಜೆ 4-30ಗಂಟೆಗೆ ಪುನಃ ಪ್ರಾರಂಭಿಸಿ ಹಲವು ತಿಂಗಳುಗಳಿಂದ ಪಾಮಲದಿನ್ನಿ ಗ್ರಾಮಸ್ಥರು ಪಡುತ್ತಿರುವ ಗೋಳಿನಿಂದ ಪಾರುಮಾಡಬೇಕೆಂದು ಸಮಸ್ತ ಗ್ರಾಮಸ್ಥರ ಪರವಾಗಿ ಆಗ್ರಹಿಸಲಾಗಿದೆ. ಇದಕ್ಕೆ ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಈ ಮನವಿ ಮೂಲಕ ಎಚ್ಚರಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೃಷ್ಣಾ ಖಾನಪ್ಪನವರ, ತಾಲೂಕಾ ಉಪಾಧ್ಯಕ್ಷ ದೀಪಕ ಹಂಜಿ, ಬಸು ಗಾಡಿವಡ್ಡರ, ಸಂಜು ಗಾಡಿವಡ್ಡರ, ವಿಠ್ಠಲ ಮೆಳವಂಕಿ, ಮಲ್ಲು ಸಂಪಗಾರ, ರಹಮಾನ ಮೋಕಾಶಿ, ಶೆಟ್ಟೆಪ್ಪ ಗಾಡಿವಡ್ಡರ, ನಿಯಾಜ ಪಟೇಲ, ಕೆಂಪಣ್ಣಾ ಕಡಕೋಳ, ಕಲ್ಲೋಳೆಪ್ಪ ಗಾಡಿವಡ್ಡರ, ರಾಮಣ್ಣಾ ಸಣ್ಣಲಗಮನ್ನವರ, ಮಲ್ಲಪ್ಪ ತಲೆಪ್ಪಗೋಳ, ಭರಮಣ್ಣಾ ಗೊರಗುದ್ದಿ, ಲಕ್ಕಪ್ಪ ನಂದಿ, ಫಕೀರಪ್ಪ ಗಣಾಚಾರಿ, ಸಿದ್ದಪ್ಪ ಬಡಕುರಿ, ಮಲ್ಲಪ್ಪ ಕೌಜಲಗಿ, ವಸಂತ ಹಂಜಿ, ರಾಜು ಹುಣಶ್ಯಾಳ, ಸಿದ್ರಾಯಿ ಅರಭಾಂವಿ ಆನಂದ ಕದಂ, ಅಪ್ಪಯ್ಯ ತಿಗಡಿ, ಮಂಜು ಗಾಡಿವಡ್ಡರ, ಸಂಗಮೇಶ ಆರೇರ, ಮಂಜು ಪ್ರಭುನಟ್ಟಿ, ಆನಂದ ಬಿ.ಕೆ. ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು