ಗೋಕಾಕ:ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ರೋಜಗಾರ ಪ್ರಚಾರ ವಾಹಿನಿಗೆ ಚಾಲನೆ ನೀಡಿದ ಇಒ ಬಸವರಾಜ ಹೆಗ್ಗನಾಯಕ

ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ರೋಜಗಾರ ಪ್ರಚಾರ ವಾಹಿನಿಗೆ ಚಾಲನೆ ನೀಡಿದ ಇಒ ಬಸವರಾಜ ಹೆಗ್ಗನಾಯಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 11 :
ಜಿಲ್ಲೆಯಾದ್ಯಂತ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಸಿಗುವ ಮೂಲಭೂತ ಸೌಕರ್ಯಗಳ ಪ್ರಚಾರ ಮಾಡುವ ಉದ್ದೇಶದಿಂದ ರೋಜಗಾರ ಪ್ರಚಾರ ವಾಹಿನಿ ವಾಹನವನ್ನು ತೊಡಗಿಸಿಕೊಳ್ಳಲಾಗಿದ್ದು, ಇದರಿಂದ ಗ್ರಾಮೀಣ ಕೂಲಿ ಕಾರ್ಮಿಕರು, ಸಣ್ಣ ರೈತರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆಂದು ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು ಶುಕ್ರವಾರ ತಾಪಂ ಕಾರ್ಯಾಲಯದಲ್ಲಿ ಉದ್ಯೋಗ ಖಾತರಿ ರೋಜಗಾರ ಪ್ರಚಾರ ವಾಹಿನಿಯನ್ನು ಉದ್ಘಾಟಿಸಿ ಮಾತನಾಡಿದರು. ಗೋಕಾಕ ಮತ್ತು ಮೂಡಲಗಿ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಪ್ರಚಾರ ವಾಹಿನಿ ಸಂಚರಿಸಲಿದೆ. ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ, ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗೆಗೆ ಈ ವಾಹನದ ಮೂಲಕ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೈತರಿಗೆ ಕೃಷಿಹೊಂಡ, ಹೊಲ ಸಮತಟ್ಟು, ಅಲ್ಪ ಆಳದ ಬಾವಿ, ತೋಟದ ಬೆಳೆಗಳಿಗೆÉ ಕೂಲಿ, ಮನೆಗಳಿಗೆ ಕಟ್ಟಲು ಕೂಲಿ, ಕೆರೆ ಹೊಳೆತ್ತುವದು, ಜಾನುವಾರು ನೀರಿನ ತೊಟ್ಟಿ, ರೈತರ ಕಣ, ಗ್ರಾಮೀಣ ಕಾಂಕ್ರಿಟ್ ರಸ್ತೆ ಮೊದಲಾದ ಪಂಚಾಯತ ರಾಜ್ಯ ಇಲಾಖೆಯ ಕಾಮಗಾರಿಗಳ ಕುರಿತು ಪ್ರಚಾರ ವಾಹಿನಿ ಮಾಹಿತಿ ನೀಡಲಿದ್ದು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಸಹಾಯಕ ನಿರ್ಧೇಶಕ ಎಸ್.ಎಚ್ ದೇಸಾಯಿ, ತಾಪಂ ಸಹಾಯಕ ಲೆಕ್ಕಾಧಿಕಾರಿ ಸರಸ್ವತಿ ಬಂದಾಯಿ, ತಾಂತ್ರಿಕ ಸಂಯೋಜಕ ಶಬ್ಬಿರ ಗಡ್ಡೆಕರ, ಐಇಸಿ ಸಂಯೋಜಕ ಶಂಕರ ಗುಜನಟ್ಟಿ, ಎಮ್.ಐ.ಎಸ್ ಸಂಯೋಜಕ ರಾಹುಲ ಚೌಗಲಾ, ವಸತಿ ವಿಷಯ ನಿರ್ವಾಹಕ ಸುಣಗಾರ, ಪಿಡಿಒಗಳಾದ ಉದಯಕುಮಾರ ಬೆಳ್ಳೂಂಡಗಿ, ಹನಮಂತ ತಾಳಿಕೋಟಿ, ವೀರಭದ್ರ ಗುಂಡಿ, ಮಾಳಿ, ಸರಕಾವತ ಮತ್ತಿತರರು ಉಪಸ್ಥಿತರಿದ್ದರು.